ಹಾಸನ: ಸಾಲದ ಹಣ ಕೊಡುವುದಾಗಿ ಹೇಳಿ ಮನೆಗೆ ಕರೆಸಿಕೊಂಡು ಮಹಿಳೆಯನ್ನು ದಂಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ನಗರದ ಹೊರವಲಯದ ಬೀರನಹಳ್ಳಿ ಕೆರೆ ನಿವಾಸಿಯಾದ ಯೋಧನ ಪತ್ನಿ ಶಶಿಕಲಾ (28) ಮೃತರು. ರಮೇಶ್ ಹಾಗೂ ಪತ್ನಿ ತೇಜಾ ಎಂಬುವರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಭಾರತೀಯ ಸೇನೆಯಲ್ಲಿರುವ ಯೋಧ ಭೀಮರಾಜು ಅವರ ಪತ್ನಿ ಶಶಿಕಲಾ ₹ 2 ಲಕ್ಷ ಸಾಲವನ್ನು ತೇಜಾಗೆ ನೀಡಿದ್ದರು. ಸಾಲದ ಹಣ ನೀಡುವಂತೆ ಶಶಿಕಲಾ ಪದೇ ಪದೇ ಕೇಳುತ್ತಿದ್ದರು. ಈ ಸಂಬಂಧ ಭಾನುವಾರ ಸಂಜೆ ಮನೆಗೆ ಕರೆದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಗೋಣಿಚೀಲದಲ್ಲಿ ಹಾಕಿ ಬಚ್ಚಲು ಮನೆಯಲ್ಲಿಟ್ಟಿದ್ದರು. ಶಶಿಕಲಾ ಬಾರದ ಕಾರಣ ಕುಟುಂಬಸ್ಥರು ಮನೆ ಕಡೆ ಬಂದಾಗ ಬಚ್ಚಲು ಮನೆಯಿಂದ ರಕ್ತ ಸೋರುತ್ತಿರುವುದು ಕಂಡಿದೆ. ಇದರಿಂದ ಆತಂಕಗೊಂಡು ಒಳಪ್ರವೇಶಿಸಿ ಪರಿಶೀಲಿಸಿದಾಗ ಕೃತ್ಯವೆಸಗಿರುವುದು ಗೊತ್ತಾಗಿದೆ.
ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ರಮೇಶ್ಗೆ ಸೇರಿದ ಆಟೊ ಗೆ ಬೆಂಕಿ ಹಚ್ಚಿದರು. ಇದರಿಂದ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು. ಶಶಿಕಲಾಗೆ ಇಬ್ಬರು ಮಕ್ಕಳಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು.