ಆಲೂರು: ವೈದ್ಯರು ಹಾಗೂ ನರ್ಸ್ಗಳ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಂಬಂಧಿಕರು ಭಾನುವಾರ ಪ್ರತಿಭಟನೆ ನಡೆಸಿದರು.
ಧರ್ಮಪುರಿ ಗ್ರಾಮದ ಜಮುನಾ ಅವರನ್ನು ಹೆರಿಗೆಗೆಂದು ಪಾಳ್ಯ ಆರೋಗ್ಯ ಕೇಂದ್ರಕ್ಕೆ ಶನಿವಾರ ದಾಖಲಿಸಲಾಗಿತ್ತು.
‘ಡಾ. ಫಾತಿಮಾ ಅವರು ಏನೂ ಸಮಸ್ಯೆಯಿಲ್ಲದೇ ಹೆರಿಗೆ ಆಗುತ್ತದೆ ಎಂದು ಭರವಸೆ ನೀಡಿ ಹೋಗಿದ್ದರು. ನಂತರ ಜಮುನಾಳಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ಸ್ಥಿತಿ ಗಂಭೀರವಾದ್ದರಿಂದ ಆಸ್ಪತ್ರೆಯಲ್ಲಿದ್ದ ನರ್ಸ್ಗಳು, ಆಂಬುಲೆನ್ಸ್ ಚಾಲಕ ಸೇರಿ ಬಲವಂತವಾಗಿ ಮಗುವನ್ನು ಹೊಟ್ಟೆಯಿಂದ ಎಳೆದರು. ತಾಯಿ ಗರ್ಭದಿಂದ ಹೊರಬಂದ ಮಗು ಐದು ನಿಮಿಷದಲ್ಲಿ ಮೃತಪಟ್ಟಿತು. ಮೈ ತುಂಬಾ ಗಾಯಗಳಾಗಿದ್ದವು. ಬೇಕಾಬಿಟ್ಟಿ ಹೆರಿಗೆ ಮಾಡಿದ್ದಾರೆ’ ಎಂದು ಪತಿ ಮಂಜುನಾಥ್ ಆರೋಪಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಆಸ್ಪತ್ರೆ ಬಳಿ ಸಂಬಂಧಿಕರು ಜಮಾಯಿಸಿ ವೈದ್ಯರು, ನರ್ಸ್ಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ‘ವೈದ್ಯರನ್ನು ಕೂಡಲೇ ವರ್ಗಾಯಿಸಬೇಕು. ಘಟನೆ ಬಗ್ಗೆ ತನಿಖೆ ಕೈಗೊಂಡು ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.
‘ಆಸ್ಪತ್ರೆಯಲ್ಲಿ ಇಂಥ ಹಲವು ಘಟನೆಗಳು ನಡೆಯುತ್ತಿದ್ದು, ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ದಾಖಲಾತಿ ಪರಿಶೀಲಿಸಿ ವೈದ್ಯರು, ನರ್ಸ್ಗಳು, ಪೋಷಕರು ಹಾಗೂ ಗರ್ಭಿಣಿ ಹೇಳಿಕೆ ಪಡೆದು ಜಿಲ್ಲಾ ವೈದ್ಯಾಧಿಕಾರಿಗೆ ಮಾಹಿತಿ ನೀಡುತ್ತೇನೆ’ ಎಂದರು.