ಹಾಸನ: ಪ್ರಜ್ವಲ್ ರೇವಣ್ಣ ಮೇ 31ರಂದು ಎಸ್ಐಟಿ ಎದುರು ಹಾಜರಾಗಿ ತನಿಖೆಗೆ ಸಹಕಾರ ನೀಡುವುದಾಗಿ ವಿಡಿಯೋ ಬಿಡುಗಡೆ ಮಾಡಿದ್ದು, ಇದು ವ್ಯವಸ್ಥಿತವಾಗಿ ಹೇಳಿ ಮಾಡಿಸಿದಂತಿದೆ’ ಎಂದು ದಲಿತ ಮುಖಂಡ ಎಚ್.ಕೆ.ಸಂದೇಶ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಪರಾಧ ಮಾಡಿದವರು ಯಾರೇ ಆಗಲಿ, ಕಾನೂನಿಗೆ ಗೌರವಿಸಬೇಕು. ಅದರಂತೆ ನಡೆದುಕೊಳ್ಳಬೇಕು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿರುವ ಆರೋಪಿಗೆ ಶಿಕ್ಷೆ ಆಗಲೇಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಹಾಗೂ ಪೆನ್ ಡ್ರೈವ್ ಹಂಚಿಕೆ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಮೇ 30ರಂದು ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡಿದ್ದು, ಎಲ್ಲರೂ ಭಾಗವಹಿಸುವಂತೆ’ ಮನವಿ ಮಾಡಿದರು.
‘ನಮ್ಮ ಹೋರಾಟ ಕೇವಲ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧವಾಗಿ ಅಲ್ಲ. ಪೆನ್ ಡ್ರೈವ್ ಹಂಚಿಕೆ ಮಾಡಿದವರೂ ಅಪರಾಧಿಗಳೇ. ಅವರ ವಿರುದ್ಧ ಕಾನೂನು ಕ್ರಮ ಆಗಬೇಕು. ಪ್ರಜ್ವಲ್ ರೇವಣ್ಣ ಅವರ ಬಂಧನ ಶೀಘ್ರ ಆಗಬೇಕಿದೆ ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು’ ಎಂದು ಹೇಳಿದರು.
‘ನಮ್ಮ ಪ್ರತಿಭಟನಾ ಮೆರವಣಿಗೆಗೆ ರಾಜ್ಯದ ಪ್ರಮುಖ ಹೋರಾಟಗಾರರು, ಬರಹಗಾರರು, ಮಹಿಳಾ ಸಂಘಟನೆಗಳ ಪ್ರಮುಖರು, ದಲಿತ ಮುಖಂಡರು, ಪ್ರಗತಿಪರ ಚಿಂತಕರು ಭಾಗವಹಿಸುತ್ತಿದ್ದಾರೆ’ ಎಂದು ತಿಳಿಸಿದರು.
ಎಂ.ಸೋಮಶೇಖರ್, ಎಸ್.ಎನ್.ಮಲ್ಲಪ್ಪ, ಉದಯ್ ಕುಮಾರ್, ರಾಜಶೇಖರ್, ಪೃಥ್ವಿ ಇದ್ದರು.