ಹಾಸನ: ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದ ಗ್ರಾಮ ಪಂಚಾಯಿತಿ ಕ್ಷೇತ್ರವನ್ನು ರದ್ದುಗೊಳಿಸಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಮಾದಿಗ ದಂಡೋರ ಸಮಿತಿ ನೇತೃತ್ವದಲ್ಲಿ ಅರಸೀಕೆರೆ ತಾಲ್ಲೂಕು ಹಳೇಕಲ್ಯಾಡಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
‘ಗ್ರಾಮದಲ್ಲಿ ಲಿಂಗಾಯತ ಹಾಗೂ ಮಾದಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮೊದಲು ಸಾಮಾನ್ಯ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿತ್ತು. ಆದರೆ ಸಾಮಾನ್ಯ ವರ್ಗದ ಕ್ಷೇತ್ರವನ್ನು ಉಳಿಸಿ ಮತ್ತೊಂದನ್ನು ರದ್ದುಪಡಿಸಲಾಗಿದೆ. ಲಿಂಗಾಯತ ಸಮುದಾಯದ ರಮೇಶ್ ಎಂಬುವರು ಗ್ರಾಮಕ್ಕೆ ₹8.50 ಲಕ್ಷ ನೀಡುವುದಾಗಿ ಹೇಳಿ, ಚುನಾವಣೆಯಲ್ಲಿ ಎಲ್ಲಾ ಮತಗಳು ತಮಗೆ ಬರಬೇಕೆಂದು ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
‘ಚುನಾವಣೆ ನಡೆಯಬೇಕೆಂದು ಪರಿಶಿಷ್ಟ ಪಂಗಡದವರು ಪಟ್ಟು ಹಿಡಿದರೆ ನಿಮ್ಮ ಮತಗಳು ನಮಗೆ ಬೇಡವೆಂದು ಧಮ್ಕಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೊ ಸಂಭಾಷಣೆ ಸಹ ಇದೆ. ಆದ್ದರಿಂದ ಜಿಲ್ಲಾಡಳಿತಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ದಲಿತವರ್ಗಕ್ಕೆ ಮೀಸಲಾತಿ ಕಲ್ಪಿಸಬೇಕು’ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಸ್ಥಾನಿಕ ಅಧಿಕಾರಿ ತಿಮ್ಮಪ್ಪಅವರಿಗೆ ಮನವಿ ಸಲ್ಲಿಸಲಾಯಿತು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ರಾಜ್ಯ ಕಾರ್ಯದರ್ಶಿ ಇಂದ್ರೇಶ್ ಜಾವಗಲ್,ಕಬ್ಬಳಿ ರಾಮಚಂದ್ರು, ಅಣ್ಣಪ್ಪ, ಹುಲಿಯಪ್ಪ, ತಿಮ್ಮಯ್ಯ, ಮಲ್ಲಿಗಮ್ಮ, ಭಾಗ್ಯಮ್ಮ, ಸಣ್ಣಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.