ಹಾಸನ: ‘ಜಿಲ್ಲೆಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಮಲೆನಾಡು ಭಾಗದಲ್ಲಿ ಕಾಡಾನೆಸಮಸ್ಯೆ ಜ್ವಲಂತವಾಗಿ ಕಾಡುತ್ತಿದೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಡಾ.ಪುಷ್ಪಾ ಅಮರನಾಥ್ ಆರೋಪಿಸಿದರು.
‘ಹಲವು ವರ್ಷಗಳಿಂದ ಆನೆ- ಮಾನವ ಸಂಘರ್ಷ ಮಿತಿ ಮೀರಿದ್ದರೂ, ಸ್ಥಳೀಯ ಶಾಸಕರು, ಸಂಸದರು ಸಮಸ್ಯೆಯನ್ನು ಸರ್ಕಾರಗಳ ಗಮನಕ್ಕೆ ತಂದು ಬಗೆಹರಿಸಲು ವಿಫಲರಾಗಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
‘ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಮೂರು ಬಾರಿಆಲೂರು- ಸಕಲೇಶಪುರ ಶಾಸಕರಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಕುಂಭಕರ್ಣ ನಿದ್ರೆಯಲ್ಲಿದ್ದು, ಈಗ ಹೋರಾಟಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ. ಅವರು ಹೋರಾಟ ಮಾಡಬೇಕಾಗಿರುವುದು ವಿಧಾನಸಭೆಯಲ್ಲಿ’ ಎಂದರು.
‘ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿದ್ದರೂ, ಜಿಲ್ಲಾಡಳಿತ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಮಸ್ಯೆ ನಿವಾರಣೆಗೆ ವೈಜ್ಞಾನಿಕ ಕ್ರಮ ಕೈಗೊಳ್ಳದೇ ಇದ್ದರೆ ಹೋರಾಟಕ್ಕಿಳಿಯುವುದು ಅನಿವಾರ್ಯ’ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ, ಅರಣ್ಯ ಸಚಿವರು ಇತ್ತ ಗಮನಹರಿಸಿ ಮಲೆನಾಡು ಭಾಗಕ್ಕೆತಾಂತ್ರಿಕ ಸಮಿತಿಯೊಂದನ್ನು ಕಳಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಹೇಗೆಎಂಬ ಬಗ್ಗೆ ವರದಿ ತಯಾರಿಸಿ, ಅದರ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕುಎಂದು ಆಗ್ರಹಿಸಿದರು.
ಗೋಷ್ಟಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ತಾರಾ ಚಂದನ್, ರಾಜ್ಯ ಘಟಕದಪ್ರಧಾನ ಕಾರ್ಯದರ್ಶಿ ಸುಜಾತ, ಮುಖಂಡರಾದ ಜಯಕುಮಾರ್, ವಿನೋದ್ ಇದ್ದರು.