ಹಾಸನ: ‘ಸಿದ್ದರಾಮಯ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸದೇ ಇದ್ದಿದ್ದರೆ, ಯಾವ ಅನಾಹುತವೂ ಆಗುತ್ತಿರಲಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಪಾದಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರು ಹರಿಸಿರಲಿಲ್ಲ. ಹಾಗೆಂದು ಅವರನ್ನು ಜೈಲಿಗೇನೂ ಹಾಕಲಿಲ್ಲ. ಈಗ ಸಿದ್ದರಾಮಯ್ಯ ಸರ್ಕಾರ ತಪ್ಪು ಮಾಡಿದ್ದು, ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
‘ರಾಜ್ಯವನ್ನು ಸಂಪೂರ್ಣ ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು. ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಕೇಳಲು ನಿಮ್ಮ ಬಳಿ ಇರುವ ಮಾನದಂಡವೇನು’ ಎಂದು ಪ್ರಶ್ನಿಸಿದರು.
‘ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪ್ರತಿಭಟಿಸುವಾಗ ರೈತ ಸಂಘಟನೆಗಳು ಎಲ್ಲಿ ಹೋಗಿದ್ದವು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಳಿರುವುದು ಅಸಂಬದ್ಧ. ಅವರ ಪಕ್ಷದ ಕಾರ್ಯಕ್ರಮ ಮಾಡುವಾಗ ಬೇರೆಯವರು ಹೇಗೆ ಬೆಂಬಲಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ಅಧಿಕಾರಕ್ಕಾಗಿ ಮೇಕೆದಾಟು ಪ್ರತಿಭಟನೆ ಮಾಡಿದ್ದೀರಿ. ಈಗ ನಾಡಿನ ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನಿಮ್ಮ ಬದ್ಧತೆಯನ್ನು ತೋರಿಸಬೇಕಿತ್ತು. ಅದರಲ್ಲಿ ವಿಫಲರಾಗಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.