ಶ್ರವಣಬೆಳಗೊಳ: ಬುಧವಾರ ರಾತ್ರಿ ಹೋಬಳಿಯ ಚೆಕ್ಕ ಗ್ರಾಮದ ಕೆರೆಯ ಏರಿ ಒಡೆದು, ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ.
ಮನೆಯಲ್ಲಿ ವಾಸವಿದ್ದ ಬಾಣಂತಿ ಹಾಗೂ ಒಂದೂವರೆ ತಿಂಗಳಿನ ಮಗುವನ್ನು ರಕ್ಷಿಸಲಾಗಿದೆ. ಕೆರೆ ಏರಿ ಬಿರುಕುಗೊಂಡು ಇದ್ದಕ್ಕಿದ್ದಂತೆ ನೀರು ಹರಿಯಲು ಆರಂಭಿಸಿತು. ನೋಡುತ್ತಿದ್ದಂತೆ ಮನೆ ಜಲಾವೃತಗೊಂಡು 5 ಜನ ಮನೆಯಲ್ಲಿ ಸಿಲುಕಿಕೊಂಡಿದ್ದರು.
ತಕ್ಷಣ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ದೋಣಿ ಮೂಲಕ ಮಗು ಹಾಗೂ ಬಾಣಂತಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಅಗ್ನಿಶಾಮಕ ದಳದ ಠಾಣಾಧಿಕಾರಿ ಗಿಡ್ಡೆಗೌಡ, ದಫೆದಾರ್ ಪುಟ್ಟಸ್ವಾಮಿ, ಚಾಲಕ ಪ್ರಕಾಶ್, ಕೆ.ಪಿ.ಸತೀಶ್, ಕುಮಾರ್, ರವಿಕುಮಾರ್ ಇದ್ದರು.
ಈ ಬಾರಿ ಅತಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿದ್ದು, ಹೋಬಳಿಯ ಕೆಲವೆಡೆ ಕೆರೆ ಏರಿ ಶಿಥಿಲಗೊಂಡು ಜನವಸತಿ ಪ್ರದೇಶಕ್ಕೂ ನೀರು ನುಗ್ಗಿದೆ. ತೋಟದ ಮನೆಗಳು ಜಲಾವೃತಗೊಂಡಿವೆ.