ರಾಮನಾಥಪುರ: ಇಲ್ಲಿಗೆ ಸಮೀಪದ ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಉಳ್ಳೇನಹಳ್ಳಿ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ಗ್ರಾಮದ ಚರಂಡಿಗಳಲ್ಲಿ ಕಸಕಡ್ಡಿ ತುಂಬಿದ್ದರಿಂದ ನೀರು ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿದೆ. ಕೆಲವು ಕಡೆ ಚರಂಡಿಯಿಲ್ಲದೇ ಕೊಳಚೆ ನೀರು ರಸ್ತೆಯ ಬದಿಯಲ್ಲಿಯೇ ಹರಿಯುತ್ತದೆ.
ಗ್ರಾಮದಲ್ಲಿ ಸುಮಾರು ನೂರು ಮನೆಗಳಿದ್ದು, 8ರಿಂದ 10 ಮನೆಯಲ್ಲಿ ಮಾತ್ರ ಶೌಚಾಲಯವಿದೆ. ಇನ್ನುಳಿದವರು ಬಹಿರ್ದೆಸೆಗೆ ಅವರ ಜಮೀನು ಅಥವಾ ಗದ್ದೆಗಳನ್ನು ಆಶ್ರಯಿಸಬೇಕಾಗಿದೆ. ಇಲ್ಲಿಯವರೆಗೆ ಆನೇಕ ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ ಎಂದು ಗ್ರಾಮದ ಯುವಕರಾದ ಸಂಪತ್ ಹಾಗೂ ಯೋಗೇಶ್ ನುಡಿಯುತ್ತಾರೆ.
ಈ ಗ್ರಾಮದ ಮುಂದೆ ಹಾದು ಹೋಗುವ ರಾಜ್ಯ ಹೆದ್ದಾರಿ ಕಿತ್ತುಹೋಗಿದ್ದು, ರಸ್ತೆಯ ಉದ್ದಕ್ಕೂ ಗುಂಡಿಗಳದ್ದೆ ಕಾರುಬಾರು. ಕೆಲವು ವಾಹನ ಚಾಲಕರು ಗುಂಡಿಯನ್ನು ತಪ್ಪಿಸಲು ಗ್ರಾಮದ ಮನೆಗಳ ಅಂಗಳದವರೆಗೂ ಬರುತ್ತಾರೆ. ಇಂಥ ಸಂದರ್ಭಗಳಲ್ಲಿ ಅಪಘಾತಗಳು ನಡೆದದ್ದೂ ಇದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಯಾರೂ ಗ್ರಾಮದತ್ತ ಸುಳಿಯುತ್ತಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.