ಸಕಲೇಶಪುರ: ಪಟ್ಟಣದ ಕುಶಾಲನಗರ ಬಡಾವಣೆ, ಶುಭಾಷ್ ಕ್ರೀಡಾಂಗಣಕ್ಕೆ ಶನಿವಾರ ಕಾಡಾನೆಗಳು ಲಗ್ಗೆ ಇಟ್ಟಿವೆ.
ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಮರಿ ಆನೆಯೂ ಸೇರಿದಂತೆ ಮೂರು ಆನೆಗಳು ಪಟ್ಟಣಲ್ಲಿ ಸುತ್ತಾಡಿ ಜನರಲ್ಲಿ ಭಯ ಹುಟ್ಟಿಸಿದವು. ಹೇಮಾವತಿ ನದಿ ಪಕ್ಕದ ಹಿಂದೂ ರುದ್ರಭೂಮಿಯಲ್ಲಿ ಕಾಣಿಸಿಕೊಂಡು, ನದಿಯ ಅಕ್ಕಪಕ್ಕದಲ್ಲಿಯೇ ಅಡ್ಡಾಡುತ್ತಿದ್ದವು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟಾಕಿ ಸಿಡಿಸಿ ವಡೂರು ಕಡೆಗೆ ಓಡಿಸಿದರು. ಶುಕ್ರವಾರ ರಾತ್ರಿ ಕೂಡ ಸಮೀಪದ ಮಳಲಿ ಸುತ್ತಮುತ್ತ ಭತ್ತದ ಬೆಳೆಯನ್ನು ತಿಂದು ಹಾಳು ಮಾಡಿವೆ. ಈ ಗದ್ದೆ ಬಯಲಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತದ ಬೆಳೆ ನಾಶ ಮಾಡಿವೆ ಎಂದು ರೈತರು ತಿಳಿಸಿದ್ದಾರೆ.