ಬ್ಯಾಡಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಉರುಳಿಬಿದ್ದ ಪರಿಣಾಮ ಅದರಲ್ಲಿದ್ದ 12ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಬುಧವಾರ ತಾಲ್ಲೂಕಿನ ಛತ್ರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಗಾಯಾಳುಗಳನ್ನು ಹಾವೇರಿ ಹಾಗೂ ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ. ಯಾವುದೇ ಸಾವು ಸಂಭವಿಸಿಲ್ಲ.
ಬ್ಯಾಡಗಿ ಘಟಕಕ್ಕೆ ಸೇರಿದ ಬಸ್ ಹಾವೇರಿಯಿಂದ ಹೊರಟು ರಾಣೆಬೆನ್ನೂರು ತಲುಪಿ ನಂತರ ಗದಗಕ್ಕೆ ತೆರಳುತ್ತಿತ್ತು. ಛತ್ರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಉರುಳಿದ ರಭಸಕ್ಕೆ ಪ್ರಯಾಣಿಕರ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ಇಬ್ಬರು ಪ್ರಯಾಣಿಕರ ತಲೆಗೆ ಪೆಟ್ಟಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು ಎಂದು ಛತ್ರ ಗ್ರಾಮದ ಮಣಿಕಂಠ ಪೋಟೇರ ಹೇಳಿದರು.