ಹಾವೇರಿ: ಕೊರೊನಾ ಸೋಂಕು ತಡೆಗಟ್ಟಲು ಲಾಕ್ಡೌನ್ ಜಾರಿಯಲ್ಲಿರುವುದರಿಂದ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಚಿನ್ನ, ಬೆಳ್ಳಿ ಅಂಗಡಿಗಳು ಭಾನುವಾರ ಮುಚ್ಚಿದ್ದವು. ಹೀಗಾಗಿ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸುವ ಜನರ ಕನಸು ನನಸಾಗಲಿಲ್ಲ.
ನಗರದ ಗೀತಾ, ಕೆಜಿಪಿ, ಪೋತದಾರ್, ಮೇಘಾ, ವರ್ಧಮಾನ್, ದೀಪಕ್, ಪವನ್ ಸೇರಿದಂತೆ ವಿವಿಧ ಜ್ಯುವೆಲರಿ ಮಳಿಗೆಗಳಲ್ಲಿ ಅಕ್ಷಯ ತೃತೀಯ ದಿನದಂದು ಪ್ರತಿವರ್ಷ ಜನರು ತುಂಬಿ ತುಳುಕುತ್ತಿದ್ದರು. ಈ ಬಾರಿ ಚಿನ್ನ ಖರೀದಿ ಮತ್ತು ವ್ಯಾಪಾರದ ಮೇಲೆ ಕೊರೊನಾ ಕರಿನೆರಳು ಕವಿದಿತ್ತು.
‘ಈ ಶುಭ ದಿನದಂದು ಚಿನ್ನ ಖರೀದಿಸಿದರೆ ಒಳಿತಾಗುತ್ತದೆ; ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಹಿಂದೂ ಮತ್ತು ಜೈನ ಧರ್ಮದ ಜನರಲ್ಲಿ ಇರುವುದರಿಂದ ಚಿನ್ನಾಭರಣಗಳಿಗೆ ಬಹು ಬೇಡಿಕೆ ಬರುತ್ತಿತ್ತು. ವ್ಯಾಪಾರಿಗಳು ಕೂಡ ವಿಶೇಷ ರಿಯಾಯಿತಿ, ಮೇಕಿಂಗ್ ಶುಲ್ಕ ಮತ್ತು ವೇಸ್ಟೇಜ್ ಶುಲ್ಕದ ಮೇಲೆ ರಿಯಾಯಿತಿ ನೀಡುತ್ತಿದ್ದರು. ಆದರೆ, ಈ ಬಾರಿ ಅದರ ಸಂಭ್ರಮವನ್ನು ಕೋವಿಡ್–19 ಕಸಿದುಕೊಂಡಿತು.