ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ಆರಾಧನೆಯಲ್ಲಿ ಮಿಂದೆದ್ದ ಭಕ್ತರು

ಹಾವೇರಿಯ ಪುರಸಿದ್ಧೇಶ್ವರ ದೇವಾಲಯಕ್ಕೆ ಭಕ್ತರ ದಂಡು: ದೇಗುಲಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ
Last Updated 11 ಮಾರ್ಚ್ 2021, 15:44 IST
ಅಕ್ಷರ ಗಾತ್ರ

ಹಾವೇರಿ: ‘ಮಹಾಶಿವರಾತ್ರಿ’ ಅಂಗವಾಗಿ ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಭಕ್ತರು ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಂದ ಶಿವನಾಮ ಸ್ಮರಣೆ, ಘಂಟೆ ಜಾಗಟೆ, ಶಂಖ ನಾದಗಳು ಮೊಳಗಿದವು.

ನಗರದ ಪುರಸಿದ್ಧೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 12.30ರವರೆಗೆ ನಿರಂತರವಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಡೀ ದೇಗುಲವನ್ನು ಬಲೂನುಗಳಿಂದ‌ ಅಲಂಕಾರ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು.ಬೆಳಿಗ್ಗೆ 7 ಗಂಟೆಗೆ ರುದ್ರಾಭಿಷೇಕ, ನಂತರ ಶಿವನಿಗೆ ಬೆಣ್ಣೆ ಅಲಂಕಾರ, ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.

ಭಕ್ತರು ವಿಶೇಷ ಅರ್ಚನೆ, ಅಭಿಷೇಕ, ಪೂಜೆ ಮಾಡಿಸುವ ಮೂಲಕ ತಮ್ಮ ಬೇಡಿಕೆಗಳು ಈಡೇರಲಿ ಎಂದು ಶಿವನಲ್ಲಿ ಬೇಡಿಕೊಂಡರು. ಈ ವಿಶೇಷ ದಿನದಂದು ಶಿವನನ್ನು ಶ್ರದ್ಧಾಭಕ್ತಿಯಿಂದ ಪ್ರಾರ್ಥಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ ಎಂದು ಅರ್ಚಕರಾದ ಅಜ್ಜಯ ಶಾಸ್ತ್ರಿ ಮತ್ತು ಚಂದ್ರಶೇಖರ ಶಾಸ್ತ್ರಿ ಹೇಳಿದರು.

ಹಾವೇರಿಯ ಬಸವೇಶ್ವರ ನಗರದ ಶಿವನ ಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರು ಮತ್ತು ಮಕ್ಕಳು ಹೊಸ ಉಡುಪು ಧರಿಸಿ, ಪೂಜಾ ಸಾಮಗ್ರಿಗಳೊಂದಿಗೆ ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು. ಅಶ್ವಿನಿ ನಗರದಲ್ಲಿರುವ ಬೃಹತ್‌ ಶಿವನ ಮೂರ್ತಿಗೆ ಹೂವು ಮತ್ತು ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಅಗಡಿ ಗ್ರಾಮದ ಹಣ್ಣಿನ ವ್ಯಾಪಾರಿ ಬಿದ್ದಾಡಪ್ಪ ಸುಣಗಾರ ಭಕ್ತರಿಗೆ ಉಚಿತವಾಗಿ ಕಲ್ಲಂಗಡಿ ಹಣ್ಣುಗಳನ್ನು ವಿತರಿಸಿದರು. ಕೆಲವು ಭಕ್ತರು ಪ್ರಸಾದವನ್ನು ಹಂಚಿದರು. ಹೂವು ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಜನರು ನೂಕುನುಗ್ಗಲಲ್ಲಿ ನಿಂತು, ಹೂವು, ಹಣ್ಣು, ಬಾಳೇಕಂದು, ತಳಿರು ತೋರಣಗಳನ್ನು ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT