ಲಾಹೋರ್: ಭಾರತದ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಸಂಬಂಧಿಸಿದ ಕೆಲವು ಕಡತಗಳನ್ನು 87 ವರ್ಷಗಳ ಬಳಿಕ ಪಾಕಿಸ್ತಾನ ಸರ್ಕಾರವು ಪ್ರದರ್ಶಿಸಿದೆ. ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಿದ ಕಡತವೂ ಇವುಗಳಲ್ಲಿ ಸೇರಿದೆ.
ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ 23 ವರ್ಷದ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23 ರಂದು ಲಾಹೋರ್ನಲ್ಲಿ ಗಲ್ಲಿಗೇರಿಸಲಾಗಿತ್ತು. ಪ್ರಕರಣದಲ್ಲಿ ಸುಖದೇವ್ ಹಾಗೂ ರಾಜಗುರು ಅವರೂ ಸಹ–ಆರೋಪಿಗಳಾಗಿದ್ದರು. ಪ್ರಕರಣದ ಎಲ್ಲ ಕಡತಗಳನ್ನೂ ಪ್ರದರ್ಶಿಸಿಲ್ಲ.
ನಿತ್ಯವೂ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಪೂರೈಸುವಂತೆ ಭಗತ್ ಸಿಂಗ್ ನೀಡಿದ್ದ ಅರ್ಜಿ, ಕೋರ್ಟ್ ಆದೇಶ ಪ್ರತಿ ಒದಗಿಸುವಂತೆ ಕೋರಿದ್ದ ಅರ್ಜಿ, ತಂದೆ ಸರ್ಕಾರ್ ಕಿಶನ್ ಸಿಂಗ್ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದ ಮನವಿ ಪತ್ರಗಳು ಸೋಮವಾರ ಪ್ರದರ್ಶಿಸಿದ ಕಡತಗಳಲ್ಲಿ ಸೇರಿವೆ.
ನೌಜವಾನ್ ಭಾರತ್ ಸಭಾದ ಪ್ರಣಾಳಿಕೆ, ವೀರ್ಭಾರತ್ ಪತ್ರಿಕೆಯ ಕೆಲವು ಪ್ರತಿಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಿದ ಇನ್ನುಳಿದ ಕಡತಗಳನ್ನು ಮಂಗಳವಾರ ಪ್ರದರ್ಶಿಸುವುದಾಗಿ ಸರ್ಕಾರ ತಿಳಿಸಿದೆ.