ಕುಮಾರಪಟ್ಟಣ: ಪಟ್ಟಣದ ವಿವಿಧ ಮತಗಟ್ಟೆಗಳಲ್ಲಿ ಅಂಗವಿಕಲರು ಬಂದು ಮತ ಚಲಾಯಿಸಿದರು. ಅಂಗವಿಕಲರಿಗಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಿದ್ದರೂ, ಕೆಲವರು ಮನೆಯಿಂದಲೇ ತಂದಿದ್ದರು. ಮತಗಟ್ಟೆಗೆ ತೆರಳಲು ಸಿಬ್ಬಂದಿ ಮತ್ತು ಸಂಬಂಧಿಕರು ಅವರಿಗೆ ನೆರವಾದರು.
‘ತ್ರಿಚಕ್ರ ಯಂತ್ರಚಾಲಿತ ವಾಹನದಲ್ಲಿ ಮತಗಟ್ಟೆಗೆ ಬಂದು ಯಾವುದೇ ಅಡೆತಡೆಯಿಲ್ಲದೆ ಮತ ಚಲಾಯಿಸಿದ್ದು ಸಂತಸ ನೀಡಿದೆ’ ಎಂದು ಕೊಡಿಯಾಲ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಹಾಕಿದ ವಿಕಲಚೇತನ ಆಂಜನೇಯ ಹೇಳಿದರು.
‘ಯುವಕರು, ಅಂಗವಿಕಲರು ಸೇರಿದಂತೆ, ಯಾರೂ ಮತದಾನದಿಂದ ವಂಚಿತರಾಗಬಾರದೆಂದು ವಿಶೇಷ ಅಭಿಯಾನಗಳ ಮೂಲಕ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಮತದಾನದ ಪ್ರಮಾಣ ಹೆಚ್ಚಾಗುವಂತೆ ಮಾಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಅಂಗವಿಕಲರಿಗೆ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಿ, ಅನುಕೂಲ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಇದೇ ರೀತಿ ಮಾಡಬೇಕು’ ಎಂದು ಸಲಹೆ ನೀಡಿದರು.