ಕಮಲಾಪುರ: ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಅವರಾದ (ಬಿ)- ಬನ್ನೂರ ಮಧ್ಯದ ನುಚ್ಚ ನಾಲಾಕ್ಕೆ ಗುರುವಾರ ಪ್ರವಾಹ ಉಂಟಾಗಿ ಆಟೊ ಕೊಚ್ಚಿ ಹೋಗಿದೆ.
ಕುಮಸಿ ಗ್ರಾಮದಿಂದ 4 ಜನ ಕಲಬುರ್ಗಿಗೆ ತೆರಳುತ್ತಿದ್ದರು. ಸೇತುವೆ ಮೇಲಿಂದ ದಾಟುವಾಗ ಪ್ರವಾಹ ಒಮ್ಮಿಂದಲೇ ಹೆಚ್ಚಾಗಿದೆ. ಒಳಗಿದ್ದ ಪ್ರಯಾಣಿಕರು ಇಳಿದು ಹೊರಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೊ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು ಇದುವರೆಗೆ ಪತ್ತೆಯಾಗಿಲ್ಲ.
ಬನ್ನೂರ 5 ಮನೆ ಕುಸಿತ: ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಬನ್ನೂರ ಗ್ರಾಮದಲ್ಲಿ 5 ಮನೆಗಳು ಕುಸಿದಿವೆ. ನೀಲಕಂಠ ಜಮಾದಾರ ಮನೆ ಸಂಪೂರ್ಣ ಕುಸಿದಿದ್ದು, ಧವಸ ಧಾನ್ಯಗಳು ತೊಯ್ದು ಹಾಳಾಗಿವೆ.
ಗೌಸ್ ಖಾನ್, ಮಹೆಬೂಬ್ ಸಾಬ್, ಬಾಬುರಾವ, ಸಿದ್ದಮ್ಮ ಪೂಜಾರಿ ಎಂಬುವವರ ಮನೆ ಗೋಡೆಗಳು ಭಾಗಶಃ ಕುಸಿದಿವೆ. ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ ಕಟ್ಟಿಮನಿ ಒತ್ತಾಯಿಸಿದ್ದಾರೆ.
ರಸ್ತೆಗಳ ಮೇಲಿನ ಡಾಂಬರ್ ಕಿತ್ತು ಹೋಗಿದೆ. ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಸೇತುವೆ ಶಿಥಿಲಗೊಂಡಿದ್ದು ಸಂಚಾರಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ದುರಸ್ತಿಗೊಳಿಸಬೇಕು. ಮಣ್ಣು ಕೊಚ್ಚಿ ಹೋದಲ್ಲಿ ಮುರುಮ್ ಹಾಕಿಸಿ ಸದ್ಯದ ಮಟ್ಟಿಗಾದರೂ ಅನುಕೂಲ ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗಂಡೋರಿ ನಾಲಾ ಜಲಾಶಯದಿಂದ ನೀರು ಬಿಟ್ಟಿದ್ದು, ಮಹಾಗಾಂವ ಸೇತುವೆ ಮೇಲೆ ಗುರುವಾರವೂ ಪ್ರವಾಹ ಮುಂದುವರಿದಿದೆ. ಸಿರಗಾಪುರದಲ್ಲಿ ನುಗ್ಗಿದ ನೀರು ಕಡಿಮೆಯಾಗಿಲ್ಲ. ಹೀಗಾಗಿ ಪರಿಹಾರ ಕೇಂದ್ರ ಸಹ ಮುಂದುವರಿದಿದೆ ಎಂದು ತಹಶೀಲ್ದಾರ್ ಅಂಜುಮ್ ತಬಸುಮ್ ತಿಳಿಸಿದರು.