ವಡಗೇರಾ: ತಾಲ್ಲೂಕಿನ ಹಾಲಗೇರಾ ಗೇಟ್ ಬಳಿ ನಿಂತಿದ್ದ ಕಬ್ಬಿನ ಲಾರಿಗೆ ಆಟೊ ಡಿಕ್ಕಿ ಹೊಡೆದು ತಾಯಿ–ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ 5 ಗಂಟೆಗೆ ನಡೆದಿದೆ.
ಹಾಲಗೇರಾ ಗ್ರಾಮದ ಬಾಷಪ್ಪ ತಂದೆ ಲಕ್ಷ್ಮಣ ದುಪ್ಪಲಿ (35), ರಮೇಶ್ (30)ಮತ್ತು ಸಿದ್ದಮ್ಮ (55) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಿನ ಜಾವ ಯಾದಗಿರಿಯಿಂದ ಉಳ್ಳೆಸೂಗುರು ಗ್ರಾಮದ ಹಾಲು ಸಾಗಾಣಿಕೆ ಮಾಡುತ್ತಿದ್ದ ಆಟೊ ಹಾಲಗೇರಾ ಗ್ರಾಮಕ್ಕೆ ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.
ಮೃತ ಬಾಷಪ್ಪ ಹಾಲಗೆರಾ ಗ್ರಾಮದವರಾಗಿದ್ದು, ರಮೇಶ್ ಮತ್ತು ಸಿದ್ದಮ್ಮ ತಾಯಿ–ಮಗ ಎಂದು ತಿಳಿದು ಬಂದಿದೆ. ಇವರು ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಹಲಕಟ್ಟಿ ಗ್ರಾಮದವರಾಗಿದ್ದು, ಹಾಲಗೇರಾದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಬಾಷಪ್ಪ ತಮ್ಮ ಮಗಳ ಚಿಕಿತ್ಸೆಗಾಗಿ ಬೆಂಗಳೂರು ಹೋಗಿ ಮರಳಿ ಯಶವಂತಪುರ ಬೀದರ್ ಎಕ್ಸ್ಪ್ರೆಸ್ ರೈಲಿಗೆ ಮರಳಿ ಬಂದು ನಸುಕಿನಲ್ಲಿ ಹಾಲಿನ ಆಟೊದಲ್ಲಿ ಹಾಲಗೇರಾ ಗ್ರಾಮಕ್ಕೆ ಹೊರಟಿದ್ದರು.
ಸ್ಥಳಕ್ಕೆ ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಯ ಬೂಳರ್ಗಿ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.