ಕಲಬುರಗಿ: ಕೋಟನೂರ (ಡಿ) ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದ ಆರೋಪಿಯೊಬ್ಬ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಂಗಳವಾರ ರಾತ್ರಿ ಗುಂಪೊಂದು ಆತನ ಕುಟುಂಬದವರ ಮೇಲೆ ಹಲ್ಲೆ ನಡೆಸಿದೆ. ಇದನ್ನು ಖಂಡಿಸಿ ಕುಟುಂಬದವರು ಹಾಗೂ ಬಿಜೆಪಿಯ ಮುಖಂಡರು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
‘ಜನವರಿ 23ರಂದು ಪುತ್ಥಳಿಗೆ ಅಪಮಾನಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳ ಪೈಕಿ ಸಂಗಮೇಶ ಪಾಟೀಲ ಅವರು ಮಂಗಳವಾರ ಜಾಮೀನಿನ ಮೇಲೆ ಹೊರಬಂದರು. ಸಂಗಮೇಶ ಅವರನ್ನು ಹುಡುಕಿಕೊಂಡು ಆತನ ಮನೆಗೆ ಬಂದ ಗುಂಪೊಂದು ಕುಟುಂಬದವರ ಮೇಲೆ ಹಲ್ಲೆ ಮಾಡಿದೆ. ಸಂಗಮೇಶ ಮನೆಯಲ್ಲಿ ಇಲ್ಲ ಎಂದರೂ ದಾಂದಲೆ ನಡೆಸಿದ್ದಾರೆ. ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಸಂಗಮೇಶ ಅವರ ಸಹೋದರ ಶಿವಕುಮಾರ ಆರೋಪಿಸಿದರು.
ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿದ ಕುಟುಂಬಸ್ಥರು, ವೀರಶೈವ ಲಿಂಗಾಯತ ಕೆಲ ಮುಖಂಡರು, ಬಿಜೆಪಿಯ ನಾಯಕರು ಸುಮಾರು ಮೂರೂವರೆ ಗಂಟೆ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕಲಬುರಗಿ–ಜೇವರ್ಗಿ ರಸ್ತೆಯಲ್ಲಿ ಪ್ರತಿಭಟನೆ ನಡೆಯಿತು.
ಕುಸಿದುಬಿದ್ದ ಸಂಸದ:
ಪ್ರತಿಭಟನೆಯ ವೇಳೆ ಬಿಜೆಪಿ ನಾಯಕರು ಹಾಗೂ ಪೊಲೀಸರ ನಡುವೆ ಸುಮಾರು ಒಂದು ಗಂಟೆ ಕಾಲ ವಾಗ್ವಾದ, ತಳ್ಳಾಟ ಜೋರಾಗಿ ನಡೆಯಿತು. ತಾಪಮಾನವು ಸುಮಾರು 44 ಡಿಗ್ರಿ ಸೆಲ್ಸಿಯಸ್ ಇತ್ತು. ಜೊತೆಗೆ ತಳ್ಳಾಟದಿಂದ ಬಸವಳಿದ ಸಂಸದ ಡಾ.ಉಮೇಶ ಜಾಧವ ಅವರು ತಲೆ ಸುತ್ತಿ ರಸ್ತೆಯಲ್ಲೇ ಕುಸಿದು ಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
‘ಪ್ರಕರಣದ ಸಂಬಂಧ ಈಗಾಲೇ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಲಬುರಗಿಯಲ್ಲಿ ಬುಧವಾರ ನಡೆದ ಪ್ರತಿಭಟನೆ ವೇಳೆ ತಲೆ ಸುತ್ತಿ ಕುಸಿದುಬಿದ್ದ ಸಂಸದ ಡಾ.ಉಮೇಶ ಜಾಧವ