ಚಿತ್ತಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ತಾಲ್ಲೂಕು ಬಂಜಾರ ಸಮಾಜದ ಮುಖಂಡ ಚಂದು ಜಾಧವ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಂಜಾರ ಸಮುದಾಯದ 40 ಲಕ್ಷ ಜನಸಂಖ್ಯೆ ಇದೆ. ಚುನಾವಣೆಯಲ್ಲಿ ಸಮಾಜದ ರೇವುನಾಯಕ ಬೆಳಮಗಿ, ಸುಭಾಷ್ ರಾಠೋಡ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಬಂಜಾರ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಬಂಜಾರ ಮತದಾರರ ಪಾತ್ರ ಮಹತ್ವದ್ದಾಗಿದೆ. ಅದನ್ನು ಬಿಜೆಪಿ ಒಪ್ಪಿಕೊಂಡಿದೆ. ಒಳ ಮೀಸಲಾತಿಯಿಂದ ಬಂಜಾರ, ಕೊರಮ, ಕೊರಚರು ಮತ ಹಾಕಿಲ್ಲ ಎಂದು ರಾಜ್ಯ ಬಿಜೆಪಿ ವರಿಷ್ಠರಿಗೆ ಅರಿವಾಗಿದೆ ಎಂದರು.
ಮುಖಂಡ ಅರವಿಂದ ಚವಾಣ್ ಮಾತನಾಡಿ, ಮಣಿಕಂಠ ರಾಠೋಡ ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ. ಜಾತಿ ನಿಂದನೆ ಮಾಡುತ್ತಿದ್ದಾರೆ. ’ಸಮರ್ಥ ಅಭ್ಯರ್ಥಿ ಎಂದು ಹೇಳಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಅವರೇ ನಿಮ್ಮ ಅಭ್ಯರ್ಥಿಯ ಅವಾಂತರ ಗಮನಿಸಿ‘ ಎಂದು ಅವರು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಜಗದೀಶ ಚವಾಣ್, ಭೀಮಸಿಂಗ್ ಚವಾಣ್, ದೇವರಾಜ್ ರಾಠೋಡ್, ನೀಲಕಂಠ ಪವಾರ್, ರಾಕೇಶ ಪವಾರ್, ದೇವಿದಾಸ್ ಚವಾಣ್, ಸುಭಾಷ ಜಾಧವ, ವಿಶಾಲ್ ನಾಯಕ, ವಿನೋಧ ಪವಾರ್, ಸಂತೋಷ ನಾಯಕ, ಮುಕೇಶ ರಾಠೋಡ್ ಇದ್ದರು.