ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿ ಸೋಲಿಸಿದ್ದೇವೆ, ಇಲಿ ಸೋಲಿಸೋದು ಕಷ್ಟವಲ್ಲ: ಮಾಲೀಕಯ್ಯ ಗುತ್ತೇದಾರ್ ವ್ಯಂಗ್ಯ

Published 31 ಮಾರ್ಚ್ 2024, 15:35 IST
Last Updated 31 ಮಾರ್ಚ್ 2024, 15:35 IST
ಅಕ್ಷರ ಗಾತ್ರ

ಕಲಬುರಗಿ: ‘2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಲ್ಲಿ ಈ ಭಾಗದ ಹುಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ ಬಿಜೆಪಿಗೆ ಈ ಬಾರಿ ಇಲಿಯಂತಿರುವ ಅಭ್ಯರ್ಥಿಯನ್ನು ಸೋಲಿಸಲು ಯಾವುದೇ ಕಷ್ಟವಿಲ್ಲ‌’ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಮಾಲೀಕಯ್ಯ ವಿ.ಗುತ್ತೇದಾರ್ ವ್ಯಂಗ್ಯವಾಡಿದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

‘ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರು. ಬಹಳ ದೊಡ್ಡ ಸ್ಥಾನದಲ್ಲಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿದ್ದಂಥವರು ದೇಶದ ಪ್ರಧಾನ ಮಂತ್ರಿ ಆಗುವಂಥ ಕ್ಯಾಂಡಿಡೇಟ್‌. ಅಂಥ ಖರ್ಗೆ ಅವರು ಕಲಬುರಗಿಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ತಾನು ನಿಂತರೆ ಇಲ್ಲಿನ ಜನ ಎತ್ತಿಹಿಡಿಯಲ್ಲ ಎಂಬ ಭಯದಿಂದ ತಮ್ಮ ಅಳಿಯನಿಗೆ ಟಿಕೆಟ್‌ ಕೊಟ್ಟಿದ್ದಾರೆ. ಅವರ ಅಳಿಯ ಇಲ್ಲಿ ಲೆಕ್ಕಕ್ಕಿಲ್ಲ. ಅಂಥ ಹುಲಿಯನ್ನೇ(ಮಲ್ಲಿಕಾರ್ಜುನ ಖರ್ಗೆ) ಸೋಲಿಸಿದ ಮೇಲೆ ಇದು ಇಲಿ ಸಮಾನ(ರಾಧಾಕೃಷ್ಣ ದೊಡ್ಡಮನಿ)’ ಎಂದು ಟೀಕಿಸಿದರು.

‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಈ ಸಲದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು’ಎಂದು ಕೋರಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅಫಜಲಪುರ ವಿಧಾನಸಭಾ ಕ್ಷೇತ್ರದಿಂದ ದೊಡ್ಡ ಮಟ್ಟದ ಮುನ್ನಡೆ ನೀಡಲಾಗಿತ್ತು. ಜೇವರ್ಗಿ ಎರಡನೇ ಅತಿದೊಡ್ಡ ಮುನ್ನಡೆ ನೀಡಿತ್ತು. ಆ ಎರಡೂ ಕ್ಷೇತ್ರಗಳಲ್ಲಿ ದೊಡ್ಡಮಟ್ಟದ ಅಭಿವೃದ್ಧಿಯಾಗಿದೆ. ಕಲಬುರಗಿ‌ಯನ್ನು ಸ್ಮಾರ್ಟ್‌ಸಿಟಿ ಮಾಡಲು ಈ ಸಲ ದಕ್ಷಿಣ ಮತಕ್ಷೇತ್ರದ ಜನರು ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಗೆಲುವಿನ ವಿಶ್ವಾಸ: ‘ಬಿಜೆಪಿಯ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ‘ಕಮಲ್ ಖೀಲೆಗಾ’ ಎಂದು ಹೇಳಿದ್ದರು. ಅವರ ಮಾತಿನಂತೆ ಕಲಬುರಗಿಯಲ್ಲಿ ಈ ಬಾರಿ ಕೂಡ ಕಮಲ ಅರಳುವುದು ನಿಶ್ಚಿತ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT