ಕಮಲಾಪುರ: ಗ್ರಾಮೀಣ ಮತಕ್ಷೇತ್ರದ ಕುಸನೂರ ತಾಂಡಾದಿಂದ ಕಲಬುರಗಿವರೆಗೆ ಬಸ್ ಸಂಚಾರಕ್ಕೆ ಶಾಸಕ ಬಸವರಾಜ ಮತ್ತಿಮಡು ಮಂಗಳವಾರ ಚಾಲನೆ ನೀಡಿದರು.
ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ತಾಂಡಾದ ನೂರಾರು ಜನ ನಿತ್ಯ ಕಲಬುರಗಿಗೆ ಸಂಚರಿಸುತ್ತಿದ್ದು, ಬಸ್ ಸಂಚಾರ ಇಲ್ಲದೆ ಪ್ರಯಾಣಕ್ಕೆ ಎಲ್ಲಿಲ್ಲದ ತೊಂದರೆ ಆಗುತ್ತಿರುವುದಾಗಿ ಶಾಸಕರ ಗಮನಕ್ಕೆ ತರಲಾಗಿತ್ತು. ಸ್ಪಂದಿಸಿದ ಶಾಸಕರು ಸಾರಿಗೆ ಇಲಾಖೆ ಅಧಿಕಾರಿಗೆ ಮಾತನಾಡಿ ಬಸ್ ಸಂಚಾರ ಆರಂಭಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು ತಾಂಡಾ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.
ಬಸ್ಗೆ ಪೂಜೆ ಸಲ್ಲಿಸಿದ ತಾಂಡಾ ನಿವಾಸಿಗಳು ಚಾಲಕ, ನಿರ್ವಾಹಕರಿಗೆ ಸನ್ಮಾನಿಸಿದರು. ಮುಖಂಡ ಶಿವು ಗುತ್ತೇದಾರ, ರಮೇಶ್ ಸಾಹು, ಅಶೋಕ ಬಬಲಾದ, ಆಕಾಶ ರಾಠೋಡ್ ಇದ್ದರು.
ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಸರಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಕೀನ ತಾಂಡಾದಲ್ಲಿ ₹70 ಲಕ್ಷ ವೆಚ್ಚದ ರಸ್ತೆ ಕಾಮಗಾರಿ ಹಾಗೂ ₹1.15 ಕೋಟಿ ವೆಚ್ಚದ ಜಲ ಜೀವನ್ ಮಿಷನ್ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಮಂಗಳವಾರ ಚಾಲನೆ ನೀಡಿದರು.
ತಾಂಡಾಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುತ್ತದೆ. ದಿನವಿಡಿ ನೀರು ಸಂಗ್ರಹಿಸುವ ಧಾವಂತದಲ್ಲಿ ಮಕ್ಕಳು ಶಾಲೆಯಿಂದಲೇ ಹೊರಗುಳಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕೇಂದ್ರದ ಬಿಜೆಪಿ ಸರ್ಕಾರ ಮನೆ ಮನೆಗೆ ನೀರು ಒದಗಿಸುವ ಜಲ ಜೀವನ ಮಿಷನ್ ಯೋಜನೆ ಜಾರಿಗೆ ತಂದಿದೆ ಎಂದರು.
ಗುಣಮಟ್ಟದ ಕಾಮಗಾರಿ ಕೈಗೊಂಡು ತಾಂಡಾ ಜನರಿಗೆ ಶೀಘ್ರ ನೀರು ಒದಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ವಿನೋದ ಪಾಟೀಲ್ ಶೈಲೇಂದ್ರ ರಾಠೋಡ್, ರಾಜು ಚೌವಾಣ್, ಅರವಿಂದ ಚೌವಾಣ್, ಅಶೋಕ ಬಬಲಾದ, ವಾಲ್ಮೀಕಿ ನಾಯಕ, ರೇವಣಸಿದ್ದಯ್ಯ, ಸುರೇಶ್ ಇದ್ದರು.