ಕಲಬುರ್ಗಿ: ಇಲ್ಲಿನ ಸೂಪರ್ ಮಾರ್ಕೆಟ್ನಲ್ಲಿರುವ ತಹಶೀಲ್ದಾರ್ ಕಚೇರಿಯ ಒಳಾಂಗಣ, ಆವರಣ ಹಾಗೂ ಬಡಾವಣೆಗಳಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಯಿತು. ತಹಶೀಲ್ದಾರ್ ಪ್ರಕಾಶ ಕುದರಿ ಅವರ ನೇತೃತ್ವದಲ್ಲಿ ಎಲ್ಲ ಸಿಬ್ಬಂದಿ ಹಾಗೂ ಪಾಲಿಕೆ ಸಿಬ್ಬಂದಿ ಜತೆಗೂಡಿ ಹಳೆಯ ಕಟ್ಟಡ ಸ್ವಚ್ಛಗೊಳಿಸಿದರು.
ಹಳೆಯದಾದ ಈ ಕಟ್ಟ ಶಿಥಿಲಾವಸ್ಥೆ ತಲುಪಿದೆ. ಕೆಲ ತಿಂಗಳ ಹಿಂದೆ ಚಾವಣಿ ಕುಸಿದುಬಿದ್ದು ಅದರ ಅವಶೇಷಗಳೂ ವಿಲೇವಾರಿ ಆಗದೇ ಇದ್ದವು. ಆವರಣದಲ್ಲಿನ ನಿವಾಸಗಳು ಕೂಡ ಹಳೆಯದಾಗಿದ್ದರಿಂದ ಅಲ್ಲಿ ಯಾರೂ ವಾಸ ಮಾಡದೇ ಪಾಳುಬಿದ್ದಿವೆ. ಆವರಣದ ತುಂಬ ತ್ಯಾಜ್ಯ ತುಂಬಿಕೊಂಡಿತ್ತು. ಒಳಗಡೆ ಹಳೆಯ ಕಡತಗಳಲ್ಲಿ ದೂಳು ಆವರಿಸಿಕೊಂಡಿತ್ತು. ಇದನ್ನು ಕಂಡು ಸ್ವತಃ ತಹಶೀಲ್ದಾರ್ ಪ್ರಕಾಶ್ ಅವರೇ ಶನಿವಾರ ಸ್ವಚ್ಛತೆಗೆ ಮುಂದಾದರು. ಇದನ್ನು ಕಂಡು ಉಳಿದೆಲ್ಲ ಸಿಬ್ಬಂದಿ ಕೂಡ ಅವರೊಂದಿಗೆ ಕೈ ಜೋಡಿಸಿದರು.