ಯಡ್ರಾಮಿ (ಕಲಬುರಗಿ ಜಿಲ್ಲೆ): ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಿಂದುಳಿದ ತಾಲ್ಲೂಕು ಯಡ್ರಾಮಿಯಲ್ಲಿ ಕೋವಿಡ್ ಮೂರನೆ ಅಲೆ ತಡೆಗೆ ಬೇಕಾದ ಸಿದ್ಧತೆಗಳು ತೃಪ್ತಿಕರವಾಗಿಲ್ಲ.
100 ಬೆಡ್ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯಲ್ಲಿ 30 ಬೆಡ್ ಮಾತ್ರ ಇವೆ. ಇದರಲ್ಲೇ ಕೋವಿಡ್ ಸೋಂಕಿತರಿಗೆ ಇರುವ ಬೆಡ್ಗಳು ಹರಿದಿದ್ದು, ದೂಳು ತಿನ್ನುತ್ತಿವೆ. 30 ಹೊಸ ಆಕ್ಸಿಜನ್ ಸಿಲಿಂಡರ್ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕತ್ತಲ ಕೋಣೆಯಲ್ಲಿ ಇಟ್ಟ ಕೆಲ ಆಕ್ಸಿಜನ್ ಸಿಲಿಂಡರ್ಗಳು ಸೋರಿಕೆಯಾಗುತ್ತಿವೆ.
ಸಾಮಾನ್ಯ ರೋಗಿಗಳ ವಾರ್ಡ್ಗಲ್ಲಿ ಕೂಡ ರಾತ್ರಿ ಪಾಳಿಯಲ್ಲಿ ವೈದ್ಯರೇ ಇಲ್ಲ!
ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕು ಸೇರಿಸಿ ಯಾಳವಾರದಲ್ಲಿ ಒಂದು ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ. ಇದೂವರೆಗೆ ಮೂಲಸೌಕರ್ಯ ಕಲ್ಪಿಸಿಲ್ಲ.
ವಡಗೇರಾ, ಅರಳಗುಂಡಗಿ, ಇಜೇರಿ, ಮಳ್ಳಿ ಸೇರಿ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಇದ್ದಾರೆ.ಬಳಬಟ್ಟಿ, ಕಡಕೋಳ, ಕಾಚಾಪುರ, ಮಾಗಣಗೇರಾ, ಕುರಳಗೇರಾ, ಬಿಳವಾರ, ಆಲೂರ, ಮುತ್ತಕೋಡ, ಇಜೇರಿ ಸೇರಿದಂತೆ 16 ಆರೋಗ್ಯ ಉಪಕೇಂದ್ರಗಳಲ್ಲಿ ಸೋಂಕಿತರ ಉಪಚಾರಕ್ಕೆ ಏನೂ ಇಲ್ಲ.
ವೈರಾಣು ಅಂಟಿಕೊಂಡವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಕೆಲ ಸಿಬ್ಬಂದಿಗೆ ತರಬೇತಿ ನೀಡಿದ್ದೇ ಇದೂವರೆಗಿನ ದೊಡ್ಡ ಸಿದ್ಧತೆ.