ಕಲಬುರ್ಗಿ: ‘ಸಾಮಾಜಿಕ ಸಮಾನತೆ ತರುವಲ್ಲಿ ಶಿಕ್ಷಣ ಮಹತ್ತರ ಪಾತ್ರ ವಹಿಸಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕ ಡಾ.ವಿ.ಟಿ. ಕಾಂಬ್ಳೆ ಹೇಳಿದರು.
ಶನಿವಾರ ಕಮಲಾಪುರ ತಾಲ್ಲೂಕಿನ ಮಹಾಗಾಂವ್ ಕ್ರಾಸ್ನ ಸರ್ಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಅಡಿಯಲ್ಲಿ ಆಯೋಜಿಸಿದ್ದ ‘2018–19ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್, ರೋವರ್ಸ್–ರೇಜರ್ಸ್, ಯುವ ರೆಡ್ ಕ್ರಾಸ್ ಮತ್ತು ಐಕ್ಯೂಎಸಿ ಘಟಕಗಳ ಚಟುವಟಿಕೆಯ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಬಿ.ಎ, ಬಿ.ಕಾಂ, ಎಂ.ಎ, ಎಂ.ಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಇರಬೇಕು. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ. ಉನ್ನತ ಶಿಕ್ಷಣ ಪಡೆದುಕೊಳ್ಳುವತ್ತ ವಿಶೇಷ ತಯಾರಿ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳತ್ತ ಶಿಕ್ಷಕರು ವಿಶೇಷ ಗಮನ ಹರಿಸಬೇಕು. ರಾಷ್ಟ್ರಪ್ರೇಮ, ಸಾಮಾಜಿಕ ಸಮಾನತೆ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.
‘ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು. ಮೌಢ್ಯತೆ ವಿರುದ್ಧ ಧ್ವನಿ ಎತ್ತಬೇಕು. ಸತತ ಅಧ್ಯಯನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ಅತಿಥಿ ಡಾ.ಶಶಿಕಾಂತ ಮಜಿಗಿ ಹೇಳಿದರು.
ಪ್ರೊ. ಶಂಕರ ಗಣಗೊಂಡ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳಿಗೆ ಸಾಂಕೇತಿಕ ಬ್ಯಾಡ್ಜ್ ಹಾಗೂ ಪುಸ್ತಕ ವಿತರಿಸಿದರು. ಕಳೆದ ವರ್ಷ ಅತಿ ಹೆಚ್ಚು ಅಂಕ ಗಳಿಸಿದ ಬಿ.ಎ ವಿದ್ಯಾರ್ಥಿ ಮೈಲಾರಿ ತಿಪ್ಪಣ್ಣ ಹಾಗೂ ಬಿ.ಕಾಂ ವಿದ್ಯಾರ್ಥಿನಿ ಶ್ವೇತಾ ಅಂಬರಾಯ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲ ಡಾ. ಜೈಕಿಷನ ಠಾಕೂರ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಭಾರತಿ ಭೂಸಾರೆ ಸ್ವಾಗತಿಸಿದರು. ಡಾ.ರಾಬಿಯ ಇಪ್ಪತ್ ಹಾಗೂ ಶಾಮಲಾ ಸ್ವಾಮಿ ಅತಿಥಿ ಪರಿಚಯ ಮಾಡಿದರು. ಡಾ. ಮೊಹಮದ್ ಯುನುಸ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಭಾರ್ಗವಿ ಎಚ್. ವಂದಿಸಿದರು. ಡಾ.ಶಶಿಕಾಂತ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಡಾ. ಜೈಕಿಷನ ಠಾಕೂರ, ಚಂದ್ರಕಾಂತ ಸಿಂಗೆ, ವಿಠಲ, ಪ್ರೊ. ದಯಾನಂದ ಸುರವಸೆ, ಸತ್ತೇಶ್ವರ ಚೌದರೆ, ಅಣ್ಣಾರಾಯ ಪಾಟೀಲ, ಬಸವಪಟ್ಟಣ, ಅಣ್ಣವೀರಪ್ಪ, ಎ.ಎಂ.ಜಮಾದಾರ, ಚಂದ್ರಕಾಂತ, ಸಂಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.