ಜೇವರ್ಗಿ: ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಹಮಾಲಿ ಕಾರ್ಮಿಕರ ಉದ್ಯೋಗವನ್ನು ಕಸಿಯುವ ಮತ್ತು ಸೌಲಭ್ಯಗಳಿಂದ ವಂಚಿಸಲಿರುವ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಕೂಡಲೇ ಹಿಂದಕ್ಕೆ ಪಡೆದುಕೊಳ್ಳುವಂತೆ ಆಗ್ರಹಿಸಿ ಬುಧವಾರ ಇಲ್ಲಿ ಅಖಂಡೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಮಾಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಹಮಾಲಿ ಕಾರ್ಮಿಕರ ಮುಷ್ಕರ ನಿಮಿತ್ತ ಅಖಂಡೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರು ದೈನಂದಿನ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದ್ದರು.
ಕೋವಿಡ್ ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ ಎಲ್ಲಾ ಹಮಾಲಿ ಕಾರ್ಮಿಕರಿಗೆತಿಂಗಳಿಗೆ ₹7,500 ಆರ್ಥಿಕ ನೆರವು ನೀಡಬೇಕು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಎಲ್ಲಾ ನಗರ, ಗ್ರಾಮೀಣ, ಬಜಾರ ಹಮಾಲಿ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಪಿಂಚಣಿ ಜಾರಿ ಮಾಡಬೇಕು. ನನೆಗುದಿಗೆ ಬಿದ್ದಿರುವ ವಸತಿ ಯೋಜನೆ ಅಡಿಯಲ್ಲಿ ಹಮಾಲಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಹಮಾಲಿ ಕಾರ್ಮಿಕರಿಗೆ ಇಎಸ್ಐ, ಪಿ.ಎಫ್ ಹಾಗೂ ಕನಿಷ್ಠ ವೇತನ ಮತ್ತು ಬೋನಸ್ ಜಾರಿಗೊಳಿಸಬೇಕು ಎಂದು ಹಮಾಲಿ ಕಾರ್ಮಿಕರು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ದಿನವೊಂದಕ್ಕೆ₹ 600 ಕೂಲಿ ನೀಡಬೇಕು ಮತ್ತು 200 ದಿನ ಕೆಲಸ ನೀಡಬೇಕು, ಈ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ಪ್ರಮುಖ 8 ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರ್ ಸಿದರಾಯ ಬೋಸಗಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.
ಜೇವರ್ಗಿ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಬಸವರಾಜ ಕೆಲ್ಲೂರ, ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಸುಭಾಷ ಹೊಸಮನಿ, ಲಕ್ಕಪ್ಪ ರದ್ದೇವಾಡಗಿ, ಮೌನೇಶ ಹನ್ನೂರ, ಸೈಯದ, ರಾಮಲಿಂಗ್, ಸುಲೇಮಾನ, ಈರಪ್ಪ, ನಿಂಗಣ್ಣ ಠಣಕೇದಾರ ಇದ್ದರು.