ಕಲಬುರ್ಗಿ: ಮಹಾನಗರದ ಅಭಿವೃದ್ಧಿಯಲ್ಲಿ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಜವಾಬ್ದಾರಿ ಮಹತ್ವದ್ದಾಗಿದ್ದು, ಮತದಾರರ ಭಾವನೆಗಳಿಗೆ ಧಕ್ಕೆ ಬರದ ಹಾಗೆ ನಗರದ ಮತ್ತು ತಮ್ಮ ತಮ್ಮ ವಾರ್ಡುಗಳ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರ ಶಿವಶಂಕರಪ್ಪ ಕರೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ವತಿಯಿಂದ ನೂತನವಾಗಿ ಮಹಾನಗರ ಪಾಲಿಕೆಗೆ ಚುನಾಯಿತರಾದ ವೀರಶೈವ ಲಿಂಗಾಯತ ಸಮುದಾಯದ ಪಾಲಿಕೆ ಸದಸ್ಯರುಗಳಿಗೆ ಗುರುವಾರ ಆಯೋಜಿಸಿದ್ದ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವೀರಶೈವ ಲಿಂಗಾಯತರು ಒಗ್ಗಟ್ಟಾಗುವುದು ಇಂದಿನ ಅತ್ಯವಶ್ಯವಾಗಿದ್ದು, ಈ ದಿಶೆಯಲ್ಲಿ ನಾವೆಲ್ಲರೂ ಒಳಪಂಗಡಗಳನ್ನು ಮರೆತು ಬಲಿಷ್ಠ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿ ಕಾರ್ಯ ನಿರ್ವಹಿಸಬೇಕು. ಅಲ್ಪಾವಧಿಯಲ್ಲಿಯೇ ನಗರದಲ್ಲಿ ಬೃಹತ್ ವಸತಿ ನಿಲಯ ತಲೆ ಎತ್ತಿದ್ದು ಖುಷಿ ತಂದಿದ್ದು, ಉನ್ನತ ಶಿಕ್ಷಣದಿಂದ ವಂಚಿತವಾಗುತ್ತಿದ್ದ ವೀರಶೈವ ಲಿಂಗಾಯತ ಸಮುದಾಯದ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿನಿಯರಿಗೆ ಈ ವಸತಿ ನಿಲಯ ಸಹಕಾರಿಯಾಗಲಿದೆ’ ಎಂದು ಪ್ರಶಂಶಿಸಿದರು.
ಕಲಬುರ್ಗಿ ಜಿಲ್ಲಾ ಘಟಕ ಅತ್ಯಂತ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಮನೂರ, ನಿರಂತರ ಚಟುವಟಿಕೆ ಮೂಲಕ ಸಮುದಾಯದಲ್ಲಿ ಜಾಗೃತಿ ಮತ್ತು ಒಗ್ಗಟ್ಟು ತರುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಕುಮಾರ ಮೋದಿ ವಹಿಸಿದ್ದರು.
ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಸುಧಾ ಹಾಲಕಾಯಿ, ಉಪಾಧ್ಯಕ್ಷೆ ಗೌರಿ ಚಿಚಕೋಟೆ, ಪದಾಧಿಕಾರಿಗಳಾದ ರಾಜುಗೌಡ ಪಾಟೀಲ ನಾಗನಳ್ಳಿ, ಅಂಬರೀಷ ಪಾಟೀಲ, ಸಂತೋಷ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನೂತನವಾಗಿ ಪಾಲಿಕೆಗೆ ಆಯ್ಕೆಯಾದ ಸುನೀಲ ಮಚ್ಚೆಟ್ಟಿ, ಗಂಗಮ್ಮ ಮುನ್ನಳ್ಳಿ, ಸಚಿನ ಕಡಗಂಚಿ, ಸುನೀಲ ಬನಶೆಟ್ಟಿ, ಪ್ರಭುಲಿಂಗ ಹಾದಿಮನಿ, ಶಾಂತಾಬಾಯಿ ಹಾಲ್ಮಠ, ಶಿವಾನಂದ ಪಿಸ್ತಿ, ಡಾ. ಶಂಭುಲಿಂಗ ಬಳಬಟ್ಟಿ, ವೀರಣ್ಣ ಹೊನ್ನಳ್ಳಿ, ರಾಜು ದೇವದುರ್ಗ, ಅರ್ಚನಾ ಬಸವರಾಜ ಬಿರಾಳ ಅವರನ್ನು ಸತ್ಕರಿಸಲಾಯಿತು.