ಯಲಗೋಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಎರಡು ಅಂಗನವಾಡಿ ಕಟ್ಟಡದ ಅನುದಾನ ₹ 36 ಲಕ್ಷ ಹಾಗೂ ಸಾತಖೇಡ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಅನುದಾನ ₹ 18 ಲಕ್ಷ, 14ನೇ ಹಣಕಾಸು ಯೋಜನೆಯಡಿಯಲ್ಲಿ ₹ 22 ಲಕ್ಷ, ಕರವಸೂಲಿಯ ಹಣ ಸೇರಿದಂತೆ ಪಂಚಾಯಿತಿಗೆ ಜಮಾಗೊಂಡ ಎಲ್ಲ ಖಾತೆಗಳ ಹಣವನ್ನು ನಾಗಪ್ಪ ತಮ್ಮ ಪತ್ನಿಯ ಬಳ್ಳಾರಿ ಜಿಲ್ಲೆಯ ಬ್ಯಾಂಕ್ನಲ್ಲಿ ಡ್ರಾ ಮಾಡಿಕೊಂಡಿದ್ದಾರೆ. ಹೀಗೆ ಹಲವಾರು ಯೋಜನೆಗಳಲ್ಲಿ ₹ 1.10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಿಡಿಒ ಹೆಸರು ಮತ್ತು ತನ್ನ ಪತ್ನಿಯ ಹೆಸರಿನ ಮೇಲೆ ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಯಲಗೋಡ, ಸಾತಖೇಡ ಎರಡು ಗ್ರಾಮ ಪಂಚಾಯಿತಿಗಳ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಬಂಧಿಸಿದ ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಮಾಹಿತಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಲಾಗಿದೆ.