ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಡಿ: ಗ್ರಾಮಗಳಿಗ ನುಗ್ಗಿದ ನೀರು

Last Updated 5 ಸೆಪ್ಟೆಂಬರ್ 2021, 14:43 IST
ಅಕ್ಷರ ಗಾತ್ರ

ವಾಡಿ: ಶನಿವಾರ ರಾತ್ರಿ ಸುರಿದ ನಿರಂತರ ಮಳೆಯಿಂದ ವಿವಿಧ ಗ್ರಾಮಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದರು.

ಬಳವಡ್ಗಿ ಹಾಗೂ ಲಕ್ಷ್ಮೀಪುರವಾಡಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿವೆ. ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಹಳ್ಳಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಜಮೀನುಗಳು ಕೆರೆಯ ಸ್ವರೂಪ ಪಡೆದುಕೊಂಡಿವೆ.

ಮುಂಗಾರು ಹಂಗಾಮಿನ ತೊಗರಿ, ಹತ್ತಿ ಬೆಳೆಗಳು ನೀರಿನ ಹರಿವಿಗೆ ಕೊಚ್ಚಿಕೊಂಡು ಹೋಗಿವೆ. ಬೆಳೆಗಳ ಮಧ್ಯೆ ನೀರು ನಿಂತಿದ್ದು ರೈತರು ಬೆಳೆನಷ್ಟದ ಭೀತಿಗೆ ಸಿಲುಕಿದ್ದಾರೆ. ದೇವಸ್ಥಾನದ ಆವರಣಕ್ಕೆ ನೀರು ನುಗ್ಗಿದ್ದರಿಂದ ಭಕ್ತರು ಪರದಾಡಿದರು. ಕಾಗಿಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ಇಂಗಳಗಿ ಶಹಾಬಾದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಬಳವಡ್ಗಿ ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ಹಿರೇಹಳ್ಳ ಉಕ್ಕಿ ಹರಿದಿದ್ದರಿಂದ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ ಜನರ ಸಂಕಷ್ಟಕ್ಕೆ ಕಾರಣವಾಯಿತು. ಭೀಮನಗರ ಹಾಗೂ ರೇಣುಕಾ ಎಲ್ಲಮ್ಮ ಬಡಾವಣೆಯ ವಿವಿಧ ಮನೆಗಳಿಗೆ ಜಲಾಗಂಡಾಂತರ ಉಂಟಾಗಿ ಜನರು ಮತ್ತೆ ಸಂಕಷ್ಟಕ್ಕೆ ಸಿಲುಕಿದರು.

ಗ್ರಾಮದ ಏಲಾಂಬಿಕಾ ದೇವಸ್ಥಾನದ ಸುತ್ತಲೂ ನೀರು ನಿಂತಿದೆ. ವಾಡಿ ಕೊಂಚೂರು ರಸ್ತೆಯ ಮೇಲೆ ಹಳ್ಳದ ನೀರು ಹರಿದಿದ್ದರಿಂದ ಸುಮಾರು 3 ಗಂಟೆಗೂ ಅಧಿಕ ಕಾಲ ಸಂಚಾರ ಸ್ಥಗಿತವಾಗಿತ್ತು. ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಶಿಕ್ಷಕರು ಶಾಲೆಗಳಿಗೆ ತೆರಳಲು ಪರದಾಡಿದರು.

ರಾವೂರು ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದ ಗಾಂಧಿನಗರ ಬಡಾವಣೆಗೆ ಸಹ ಮಳೆ ನೀರು ನುಗ್ಗಿದೆ. ಸಿಸಿ ರಸ್ತೆ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದರಿಂದ ರೈಲ್ವೆ ಗೇಟಿನಿಂದ ಹರಿದು ಬಂದ ನೀರು ಮನೆಗಳಿಗೆ ನುಗ್ಗಿವೆ. ಗ್ರಾಮದ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳು ಹಾಳಾಗಿವೆ.

ರೈಲ್ವೆ ಗೇಟಿನಿಂದ ಹಳ್ಳಕ್ಕೆ ಒಳಚರಂಡಿ ವ್ಯವಸ್ಥೆ ಮಾಡಿದರೆ ಹಾಗೂ ಗ್ರಾಮದೊಳಗೆ ಇರುವ ಚರಂಡಿ ಸ್ವಚ್ಛ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತದೆ. ಸ್ಥಳೀಯ ಗ್ರಾಮ ಪಂಚಾಯಿತಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮದ ಮುಖಂಡ ಯುವರಾಜ ರಾಠೋಡ, ತಿಮ್ಮಯ್ಯ, ಭಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT