ಕಲಬುರ್ಗಿ: ಹೈದರಾಬಾದ್ ಕರ್ನಾಟಕದ ಇತಿಹಾಸ ರಚಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯಾ ಜಿಲ್ಲೆಗಳ ಪರಿಣತರ ಸಮಿತಿ ರಚಿಸುವಂತೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಸೂಚಿಸಿದರು.
ಗುರುವಾರ ಇಲ್ಲಿ ‘ಹೈದರಾಬಾದ್ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಈ ಭಾಗದ ಎಲ್ಲ ವಿಷಯಗಳನ್ನು ಸಂಗ್ರಹಿಸುವುದು ಅವಶ್ಯ. ಇಲ್ಲಿನ ಎಲ್ಲ ಜಿಲ್ಲೆಗಳ ವಿದ್ವಾಂಸರನ್ನು ಆಹ್ವಾನಿಸಿ ಕಾರ್ಯಾಗಾರ ಮಾಡಿ ಸಮಗ್ರ ಮಾಹಿತಿ ಪಡೆಯಬೇಕು’ ಎಂದರು.
"ಇಲ್ಲಿಯ ಇತಿಹಾಸವು ಕನ್ನಡ, ಉರ್ದು, ಪರ್ಶಿಯನ್, ಮರಾಠಿ ಹಾಗೂ ಈ ಭಾಗದ ಇನ್ನಿತರೆ ಭಾಷೆಗಳಲ್ಲಿ ಇದ್ದು, ಅದನ್ನು ಸಂಗ್ರಹಿಸಬೇಕು' ಎಂದರು.
‘ಆಯಾ ಕ್ಷೇತ್ರಗಳಲ್ಲಿ ಪಾವೀಣ್ಯತೆ ಸಾಧಿಸಿರುವವರಿಂದ ಮಾಹಿತಿ ಸಂಗ್ರಹಿಸಬೇಕು. ಈ ಭಾಗದ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯ ಸ್ಥಾಪಿಸಬೇಕು’ ಎಂದು ಸಮಿತಿಯ ಸದಸ್ಯರು ಸಲಹೆ ನೀಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿ.ಸೋಮಶೇಖರ, ಸಮಿತಿಯ ಸದಸ್ಯ ಕಾರ್ಯದರ್ಶಿ ಲಕ್ಷ್ಮಣ ದಸ್ತಿ, ಸದಸ್ಯರಾದ ಡಾ.ಮಜೀದ್ ಡಾಗಿ, ಎನ್.ಎ.ವಹಾಬ್ ಅಂದಲೀಬ್, ಡಾ.ಮೊಹಮ್ಮದ ನಜರುಲ್ಲಾ ಬಾರಿ, ಡಾ.ಬಿ.ಸಿ.ಮಹಾಬಳೇಶ್ವರಪ್ಪ, ಡಾ.ರಾಜೇಂದ್ರ ಪ್ರಸಾದ, ಕೆ.ಎಸ್.ಎನ್. ಚಿಕ್ಕೆರೂರು ಪಾಲ್ಗೊಂಡಿದ್ದರು.