ಕಲಬುರಗಿ: ‘ಆರ್ಥಿಕ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದ ಹೂಗಾರ ಸಮುದಾಯದವರು ಸಂಘಟಿತರಾಗಬೇಕು’ ಎಂದು ಹೂಗಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯಕಾಂತ ಫುಲಾರಿ ಕರೆ ನೀಡಿದರು.
ಇಲ್ಲಿನ ಕರುಣೇಶ್ವರ ಕಾಲೊನಿಯ ಕೋರಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಹೂಗಾರ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ಹೂಗಾರ ಸಮಾಜವು ಜೀರ, ಪೂಜಾರ, ಗುರವ, ಫುಲಾರಿ ಎಂಬ ಹಲವು ಉಪನಾಮಗಳಿಂದ ಗುರುತಿಸಿಕೊಂಡಿದೆ. ಹೀಗಾಗಿ ನಮ್ಮ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಮಾಜದ ಮುನ್ನೆಲೆಗೆ ಬರುವ ಸಲುವಾಗಿ ಹೂಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್.ಟಿ) ವರ್ಗಕ್ಕೆ ಸೇರ್ಪಡೆ ಮಾಡಬೇಕು. ಇದಕ್ಕಾಗಿ ರಾಜ್ಯದ ಹಾಲಿ ಮತ್ತು ಮಾಜಿ ಶಾಸಕ, ಸಚಿವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವ ಅಭಿಯಾನವನ್ನು ಕೈಗೊಳ್ಳಲಾಗುವುದು. ಈ ಅಭಿಯಾನಕ್ಕೆ ಸಮಾಜದ ಬಂಧುಗಳು ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಗುರುದೇವ ಶರಣರು, ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಶಿವಶರಣಪ್ಪ ಹೂಗಾರ ನದಿಸಿನ್ನೂರ, ಪ್ರೊ.ಬಿ.ಪಿ ಹೂಗಾರ, ಶಂಬಣ್ಣ ಹೂಗಾರ, ಪ್ರಕಾಶ ಹೂಗಾರ, ಮಲ್ಲಿಕಾರ್ಜುನ ಹೂಗಾರ, ದತ್ತು ಹೂಗಾರ ಮಾತನಾಡಿದರು.