ಅಫಜಲಪುರ: ‘ತಾಲ್ಲೂಕಿನಲ್ಲಿ ಮರಳುಅಕ್ರಮ ಸಾಗಾಣಿಕೆಯನ್ನು ತಡೆಗಟ್ಟಲು ಚೆಕ್ ಪೋಸ್ಟ್ಗಳಲ್ಲಿ ಭದ್ರತೆಯನ್ನು ಬಲಗೊಳಿಸುವುದರ ಜತೆ ವಿಶೇಷ ನಿಗಾ ವಹಿಸಲು ತಾಲ್ಲೂಕು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು’ ಎಂದು ಕಲಬುರಗಿ ಸಹಾಯಕ ಆಯುಕ್ತೆ ಮೋನಾ ರೋತ್ ತಿಳಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಿಯಮ ಮೀರಿ ಮರಳು ಸಾಗಾಟ ನಡೆಯಬಾರದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಎಲ್ಲ ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಸರ್ಕಾರಕ್ಕೆ ರಾಜಧನ ಸಂದಾಯವಾಗುತ್ತದೆ. ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಮರಳನ್ನು ಜಮೀನಿನ ಸರ್ವೇ ನಂಬರ್ ಮಾಹಿತಿ ಪಡೆದುಕೊಂಡು ಪಹಣಿ ಪತ್ರದಲ್ಲಿ ಅಕ್ರಮ ಮರಳು ಸಂಗ್ರಹಿಸಲಾಗಿದೆ ಎಂದು ನಮೂದಿಸಬೇಕು. ಒಂದು ವೇಳೆ ಲೆಕ್ಕಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಸುಲ್ಪಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಮ್ ಅಜಗುಂಡ್, ಹಿಂದುಳಿದ ಇಲಾಖೆಯ ಅಧಿಕಾರಿ ಚೇತನ್ ಗುರಿಕಾರ್, ಪಿಎಸ್ಐಗಳಾದ ವಿಶ್ವನಾಥ್ ಮುದರೆಡ್ಡಿ, ಅಶೋಕ್ ಪಾಟೀಲ್, ರಾಜಶೇಖರ್ ರಾಠೋಡ್ಇದ್ದರು.