ಕಮಲಾಪುರ: ತಾಲ್ಲೂಕಿನ ಮಹಾಗಾಂವ ಕ್ರಾಸ್ನಲ್ಲಿ ಮನೆಯ ಮೇಲ್ಛಾವಣಿ ಮುಂಭಾಗದ ಸಜ್ಜಾ ಕಳಚಿ ತಲೆಯ ಮೇಲೆ ಬಿದ್ದು ಶಿಕ್ಷಕಿ ಮೃತಪಟ್ಟಿದ್ದು, ಆಕೆಯ ಮಗ ಗಾಯಗೊಂಡಿದ್ದಾರೆ.
ಮೂಲತಃ ಅಪಚಂದ ಗ್ರಾಮದ ನಿವಾಸಿ ಮಹಾಗಾಂವ ಕ್ರಾಸ್ನ ಸಿದ್ಧ ಭಾರತಿ ವಿದ್ಯಾಮಂದರದಲ್ಲಿ ಶಿಕ್ಷಕಿಯಾಗಿದ್ದ ಅನಿತಾ ಬಸವಣಯ್ಯ ಮಠಪತಿ (35) ಮೃತರು. ಆಕೆಯ ಪುತ್ರ ಪ್ರಶಾಂತ ಗಾಯಗೊಂಡಿದ್ದಾನೆ.
ಮಹಾಗಾಂವ ಕ್ರಾಸ್ನಲ್ಲಿ ಮನೆಯಿದ್ದು, ಮಧ್ಯಾಹ್ನ ಸಮೀಪದ ಕಟ್ಟೊಳ್ಳಿಯಲ್ಲಿ ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿದ್ದರು. ಸ್ವಲ್ಪ ದಣಿವಾರಿಸಿಕೊಳ್ಳಲು ಮನೆ ಮುಂದೆ ಕುಳಿತಿದ್ದರು. ಮಗನಿಗೆ ಮೊಬೈಲ್ ತರಲು ಹೇಳಿದ್ದರು. ಮಗ ಮೊಬೈಲ್ ತರುತ್ತಿದ್ದಂತೆ ಮೇಲ್ಛಾವಣಿಯ ಸಜ್ಜಾ ಕಳಚಿ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಅನಿತಾ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮೃತಪಟ್ಟರು. ಪ್ರಶಾಂತ ಕೈಗೆ ಗಂಭೀರ ಗಾಯವಾಗಿದೆ.
ಗುರುವಾರ ಮಧ್ಯಾಹ್ನ ಅಪಚಂದ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಿದ್ಧಭಾರತಿ ಶಾಲೆಗೆ ರಜೆ ಘೋಷಿಸಲಾಗಿದೆ.