ಕಾಳಗಿ(ಕಲಬುರಗಿ ಜಿಲ್ಲೆ): ತಾಲ್ಲೂಕಿನ ರೇವಗ್ಗಿ ಗ್ರಾಮದಲ್ಲಿ ಸೇಡಂ ಉಪ ವಿಭಾಗಧಿಕಾರಿಯೂ(ಎಸಿ) ಆಗಿರುವ ರೇವಗ್ಗಿ (ರಟಕಲ್) ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಆಶಪ್ಪ ಪೂಜಾರಿ ಅವರು ಶನಿವಾರ ಬೆಳಿಗ್ಗೆ ದೇವಸ್ಥಾನದ ಗೋವುಗಳನ್ನು ಮೇಯಿಸಿದರು.
ರೇವಣಸಿದ್ದೇಶ್ವರ ಗುಡ್ಡ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, ಇಲ್ಲಿನ ಗೋಶಾಲೆಯಲ್ಲಿ 295 ಜಾನುವಾರುಗಳಿವೆ. 7 ಜನ ಗೋಪಾಲಕರು ನಿತ್ತ ಬೆಳಿಗ್ಗೆ 10ರಿಂದ ಸಂಜೆಯವರೆಗೆ ಗೋವುಗಳನ್ನು ಮೇಯಿಸುತ್ತಾರೆ.
ಸರಿಯಾಗಿ ಮೇವು ಸಿಗದೆ ಸೊರಗಿದ ಗೋವುಗಳನ್ನು ಆಶಪ್ಪ ಪೂಜಾರಿ ಅವರು ಗಮನಿಸಿದರು. ಶುಕ್ರವಾರ(ಆ.11) ರಾತ್ರಿ ಗುಡ್ಡದಲ್ಲೇ ವಾಸ್ತವ್ಯ ಮಾಡಿದರು. ಶನಿವಾರ ಬೆಳಿಗ್ಗೆ 6ಕ್ಕೆ ಗೋಶಾಲೆಯ ಎಲ್ಲಾ ರಾಸುಗಳನ್ನು ಹೊರಗಡೆ ಬಿಟ್ಟರು. ಗುಡ್ಡದಲ್ಲಿ ಓಡಾಡಿಸುತ್ತಾ ಹಸಿ ಮೇವು ಕಾಣಿಸುತ್ತಿದ್ದ ಜಾಗದಲ್ಲಿ ನಿಲ್ಲಿಸಿ 10 ಗಂಟೆಯವರೆಗೂ ಮೇಯಿಸಿದರು.
'ನಿತ್ಯ ಬೆಳಿಗ್ಗೆ 6 ಗಂಟೆಯ ತಂಪು ಹೊತ್ತಿನಿಂದ ಗೋವುಗಳನ್ನು ಮೇಯಿಸುವುದು ರೂಢಿಮಾಡಿಕೊಳ್ಳಿ. ಇದರಿಂದ ಹಸುಗಳು ಹೆಚ್ಚು ಮೇವು ತಿಂದು ದೈಹಿಕ ಆರೋಗ್ಯದಿಂದ ಸದೃಢವಾಗುತ್ತವೆ' ಎಂದು ಆಶಪ್ಪ ಅವರು ಗೋಪಾಲಕರಿಗೆ ಸೂಚಿಸಿದರು.