ಸೇಡಂ: ತಾಲ್ಲೂಕಿನ ಹಂದರಕಿ ಗ್ರಾಮದ ಆರಾಧ್ಯ ದೈವ ಲಿಂಗಪ್ಪ ತಾತಾನವರ ಜಾತ್ರಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆಯಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಮೆರವಣಿಗೆ ಬೆಳಿಗ್ಗೆ 10.30ಕ್ಕೆ ಆರಂಭಗೊಂಡು ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹಲಗೆ ಮೇಳ, ನಂದಿಕೋಲು ಕುಣಿತ, ಭಜನೆ ಪದಗಳು ಗಮನ ಸೆಳೆದವು. ಜನರು ಮನೆಯ ಮಾಳಿಗೆ, ಕಟ್ಟಡ, ಮರಗಿಡಗಳ ಮೇಲೆ ಕುಳಿತು ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ತೊಗರಿ, ಕಡಲೆ, ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಗದ್ದುಗೆಗೆ ಸಮರ್ಪಿಸಿದರು. ಸುಗ್ಗಿ ಉತ್ಪಾದನೆಯು ಹೆಚ್ಚಲಿ ಎಂದು ಬೇಡಿಕೊಂಡರು.
ಪಲ್ಲಕ್ಕಿ ಉತ್ಸವ ಮುಗಿದ ನಂತರ ದೇವಾಲಯದ ಮುಂದಿನ ಕಟ್ಟೆಯ ಬಳಿ ನಡೆದ ‘ಸರಪಳಿ ಕಡಿಯುವಿಕೆ’ಯನ್ನು ಭಕ್ತರು ಕಾತುರದಿಂದ ನೋಡಿ ನಮಿಸಿದರು. ಸರಪಳಿ ಕಡಿಯುತ್ತಿದ್ದಂತೆ ಹಳದಿ ಬಣ್ಣ ಎಸೆದುದರಿಂದ ಇಡೀ ವಾತಾವರಣ ಸಂಪೂರ್ಣ ಹಳದಿಮಯವಾಯಿತು.
ಲಿಂಗಪ್ಪ ತಾತಾ ಸಾನ್ನಿದ್ಯ ವಹಿಸಿದ್ದರು. ಪ್ರಮುಖರಾದ ಆನಂದ ಪೂಜಾರಿನೇತೃತ್ವ ವಹಿಸಿದ್ದರು. ಸೇಡಂ ಪಿಎಸ್ಐ ಸುಶೀಲಕುಮಾರ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.