ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಬಿಡುವಂತೆ ಎಸ್ಐ ಜತೆಗೆ ತಕರಾರು ತೆಗೆದು, ಅವರ ಮೇಲೆ ಹಲ್ಲೆ ಮಾಡಿದ ಆರೋಪದಡಿ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯನ್ನು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಟೇಷನ್ ಬಜಾರ್ ಠಾಣೆಯ ಎಸ್ಐ ವಂದನಾ ಅವರ ಮೇಲೆ ಮಂಜುಳಾ ಚಂದ್ರಶೇಖರ(45) ಎಂಬುವವರು ಹಲ್ಲೆ ಮಾಡಿದ ಆರೋಪಿ.
‘ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಣೆಗೆ ಮುಖ್ಯಮಂತ್ರಿಗಳು ನಗರಕ್ಕೆ ಬಂದಿದ್ದರು. ಪರೇಡ್ ಮೈದಾನದಲ್ಲಿ ಸಾರ್ವಜನಿಕರಿಂದ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿಗಳು ಐವಾನ್ –ಎ–ಶಾಹಿ ಅತಿಥಿ ಗೃಹದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವೇಳೆ ಪ್ರವೇಶ ದ್ವಾರಕ್ಕೆ ಬಂದ ಕೆಲವರು ಮನವಿ ಸಲ್ಲಿಕೆಗೆ ಅವಕಾಶ ನೀಡುವಂತೆ ಕೋರಿದರು. ಅಂಚೆ ಪತ್ರ ಮೂಲಕ ಮನವಿ ಸಲ್ಲಿಸುವಂತೆ ಮನವೊಲಿಸಿ ಕಳುಹಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಂಜುಳಾ ಅವರು ಮನವಿ ಪತ್ರ ಸಲ್ಲಿಸಲು ಅವಕಾಶ ಕೊಡುವಂತೆ ತಂಟೆ ತೆಗೆದರು. ಅತಿಥಿ ಗೃಹಕ್ಕೆ ನುಗ್ಗಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು. ನನ್ನ ಎದೆಯ ಮೇಲಿನ ಸಮವಸ್ತ್ರ ಹಿಡಿದು, ಕಪಾಳಕ್ಕೆ ಜೋರಾಗಿ ಹೊಡೆದರು’ ಎಂದು ವಂದನಾ ಅವರು ಆರೋಪಿಸಿ, ದೂರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.