ಕಲಬುರ್ಗಿ: ಅನೈತಿಕ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸರು ಶನಿವಾರ ಎಂಟು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ವಾಡಿ ಪಟ್ಟಣದ ಪೀಲಕಮ್ಮಾ ಬಡಾವಣೆ ನಿವಾಸಿ ಜಗದೀಶ ಮಲ್ಲಿಕಾರ್ಜುನ (32) ಕೊಲೆಗೀಡಾದವರು. ಇದೇ ಬಡಾವಣೆಯ 39 ವರ್ಷದಮಹಿಳೆಯೊಬ್ಬರನ್ನುಬೈಕ್ ಮೇಲೆ ಕರೆದುಕೊಂಡು ಬಂದ ಕಾರಣಕ್ಕೆ, ಕೋಪಗೊಂಡ ಮಹಿಳೆಯಕೋಮಿನ ಹಲವರು ಗುಂಪುಗೂಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಗದೀಶ ಅವರು ಮಹಿಳೆಯನ್ನು ತಮ್ಮ ಬೈಕ್ ಮೇಲೆ ಹತ್ತಿಸಿಕೊಂಡು ಶುಕ್ರವಾರ ವಾಡಿ ಪಟ್ಟಣದಿಂದ ಶಹಾಬಾದ್ ನಗರಕ್ಕೆ ಬಂದಿದ್ದರು. ಇದನ್ನು ಗಮನಿಸಿದ ಒಂದು ಕೋಮಿನ ಹತ್ತಕ್ಕೂ ಹೆಚ್ಚು ಮಂದಿಯ ಗುಂಪು ಅವರನ್ನು ಹಿಂಬಾಲಿಸಿ, ನಗರ ಹೊರವಲಯದ ಅಶೋಕ ಪೆಟ್ರೋಲ್ ಬಂಕ್ ಬಳಿ ತಡೆದು ನಿಲ್ಲಿಸಿತು.
ಒಂದು ಕೋಣೆಯಲ್ಲಿ ಕೂಡಿ ಹಾಕಿ ಮನಸೋ ಇಚ್ಚೆ ಹಲ್ಲೆ ನಡೆಸಿದರು. ಜಗದೀಶ ಅವರು ತೀವ್ರ ನಿತ್ರಾಣಗೊಂಡ ಮೇಲೆ ಗುಂಪು ಮಹಿಳೆಯನ್ನು ಕರೆದುಕೊಂಡು ಪರಾರಿಯಾದರು. ಕೆಲ ಗಂಟೆಗಳ ನಂತರ ಜಗದೀಶ ತಮ್ಮ ಮೊಬೈಲ್ನಿಂದ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ವಾಹನ ಸಮೇತ ಸ್ಥಳಕ್ಕೆ ಧಾವಿಸಿದ ಅವರು ಸ್ನೇಹಿತರು ವಾಡಿ ಕರೆದೊಯ್ದು ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಿದರು. ಆದರೆ, ವೈದ್ಯರು ಅವರ ಸ್ಥಿತಿ ಚಿಂತಾಜನಕವಾಗಿದ್ದು ಸರ್ಕಾರಿ ಆಸ್ಪತ್ರೆಗೆ ಸೇರಿಸುವಂತೆ ಸೂಚಿಸಿದರು.
ನಂತರ ವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಅವರು ಬದುಕುಳಿಯಲಿಲ್ಲ.
ಜಗದೀಶ ಅವರಿಗೆ ಮೂವರು ಮಕ್ಕಳಿದ್ದಾರೆ. ಪತ್ನಿ ಕೌಟುಂಬಕ ತಂಟೆಯ ಹಿನ್ನೆಲೆಯಲ್ಲಿ ತವರು ಸೇರಿದ್ದಾರೆ. ಇವರೊಂದಿಗೆ ಬೈಕ್ ಮೇಲೆ ಬಂದ ಮಹಿಳೆಗೂ 20 ವರ್ಷದ ಪುತ್ರ ಇದ್ದಾನೆ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಶುಕ್ರವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಶಹಾಬಾದ್ ಪೊಲೀಸರು ಬಂಧಿಸಿದ ಎಂಟು ಮಂದಿಯ ವಿಚಾರಣೆ ನಡೆಸಿದ್ದಾರೆ.