ಕಲಬುರ್ಗಿ: ಬೈಕ್, ಸ್ಕೂಟರ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ನಗರದ ಲಾಹೋಟಿ ಪೆಟ್ರೋಲ್ ಪಂಪ್ಗೆ ಬಂದ ಗ್ರಾಹಕರಿಗೆ ಅಚ್ಚರಿ ಕಾದಿತ್ತು. ಪಂಪ್ ಮಾಲೀಕರು ಹಾಗೂ ಸಿಬ್ಬಂದಿ ಗುಲಾಬಿ ಹೂವನ್ನು ನೀಡುತ್ತಲೇ ಹೆಲ್ಮೆಟ್ ಹಾಕಿಕೊಳ್ಳುವ ಮೂಲಕ ಸಂಭವನೀಯ ಅವಘಡಗಳಿಂದ ಪಾರಾಗಿರಿ ಎಂದು ಮನವಿ ಮಾಡಿದರು.
ಭಾನುವಾರ ಈ ವಿನೂತನ ಜಾಗೃತಿಯ ಮೂಲಕ ಪೆಟ್ರೋಲ್ ಪಂಪ್ನವರು ಗ್ರಾಹಕರ ಗಮನ ಸೆಳೆದರು.
ಕಲಬುರ್ಗಿ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ ಅವರು ನಗರದ ಪೆಟ್ರೋಲ್ ಪಂಪ್ ಮಾಲೀಕರ ಸಭೆ ನಡೆಸಿ ಹೆಲ್ಮೆಟ್ ಧರಿಸಿದವರ ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕಬೇಕು ಎಂದು ಸೂಚಿಸಿದ್ದರು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕೂ ಮುನ್ನ ಪೆಟ್ರೋಲ್ ಪಂಪ್ ಸಿಬ್ಬಂದಿ ಗ್ರಾಹಕರಿಗೆ ನಯವಾಗಿಯೇ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದ್ದಾರೆ.
ಸೆಪ್ಟೆಂಬರ್ 1ರಿಂದಲೇ ರಾಷ್ಟ್ರೀಯ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ರಾಜ್ಯ ಸರ್ಕಾರ ದಂಡದ ಪ್ರಮಾಣದಲ್ಲಿ ಶೇ 50ರಷ್ಟು ಕಡಿಮೆ ಮಾಡಿ ಕಾಯ್ದೆ ಜಾರಿಗೊಳಿಸಿದೆ. ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದರೆ ಪೊಲೀಸರು ₹ 500 ದಂಡ ವಿಧಿಸಬಹುದಾಗಿದೆ.