‘ಕನ್ನಡದ ಮೊದಲು ಗದ್ಯ ಕೃತಿ ಕವಿರಾಜಮಾರ್ಗದ ಮೂಲಕ ಕನ್ನಡ ಭಾಷೆಯ ಪ್ರಾಚೀನ ಪರಂಪರೆಯ ಹಿರಿಮೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕೂಟರು ಆಳಿರುವ ನಾಡಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ನಮ್ಮ ಹೆಮ್ಮೆ. ತನ್ನ ಆಳ್ವಿಕೆಯ ಕಾಲದಲ್ಲಿ ಹಲವಾರು ಜನಪರ ಕೆಲಸಗಳ ಮೂಲಕ ಕಲಬುರ್ಗಿ ನಾಡನ್ನು ಶ್ರೀಮಂತಗೊಳಿಸಿದ ಅರಸ ಅಮೋಘ ವರ್ಷ ನೃಪತುಂಗ. ಕಲೆ, ಸಾಹಿತ್ಯ, ಸಂಸ್ಕೃತಿಗಳ ಪೋಷಕನಾಗಿ ನೃಪತುಂಗ ಮಾಡಿರುವ ಕೆಲಸಗಳು ಅಜರಾಮರ. ಸ್ವತಃ ಕವಿಯೂ ಆಗಿದ್ದ ನೃಪತುಂಗ ತನ್ನ ಆಸ್ಥಾನದಲ್ಲಿ ವಿವಿಧ ಮತಗಳ ಕವಿಗಳು, ಪಂಡಿತರು, ಧರ್ಮ ಪ್ರಸಾರಕರಿಗೆ ಆಶ್ರಯ ನೀಡುವುದರ ಮೂಲಕ ಸಾಹಿತ್ಯ, ಸಂಸ್ಕೃತಿಯ ರಕ್ಷಕನಾಗಿ ಕೆಲಸ ಮಾಡಿದ್ದರು. ಮಳಖೇಡವನ್ನು ರಾಜಧಾನಿಯನ್ನಾಗಿಸಿ ಆಳ್ವಿಕೆ ಮಾಡಿದ ರಾಷ್ಟ್ರಕೂಟ ಅರಸರು ಈ ನೆಲಕ್ಕೆ ನೀಡಿರುವ ಕೊಡುಗೆ ಅಪಾರ. ಆದ್ದರಿಂದ ಕೇಂದ್ರಿಯ ವಿ.ವಿ.ಗೆ ಬರುವ ಭಾರತದ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಈ ನೆಲದ ವೀರನ ಇತಿಹಾಸ ಪರಿಚಯಿಸುವ ಕೆಲಸ ಮಾಡಬೇಕಾಗಿದೆ’ ಎಂದು ಸೇನೆಯ ಕಾರ್ಯಕರ್ತರು ಮನವಿಯಲ್ಲಿ ತಿಳಿಸಿದ್ದಾರೆ.