ಆಳಂದ (ಕಲಬುರ್ಗಿ ಜಿಲ್ಲೆ): ‘ಗುರು ಸನ್ಮಾರ್ಗದ ದಾರಿ ತೋರುವ ಶಕ್ತಿಯಾಗಿದ್ದು, ಪ್ರತಿಯೊಬ್ಬ ಭಕ್ತನನ್ನು ಉದ್ಧರಿಸುವುದು ಮಠದ ಮೊದಲ ಕಾರ್ಯವಾಗಿದೆ’ ಎಂದು ಮೈಂದರ್ಗಿಯ ಸಿದ್ದಾಶ್ರಮ ವಿರಕ್ತ ಮಠದ ನೂತನ ಪೀಠಾಧಿಪತಿ ಮೃತ್ಯುಂಜಯ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಗಡಿ ಭಾಗದ ಮೈಂದರ್ಗಿಯ ಸಿದ್ದಾಶ್ರಮ ವಿರಕ್ತ ಮಠದಲ್ಲಿ ಸೋಮವಾರ ತಮ್ಮ ಪಟ್ಟಾಧಿಕಾರ ಮಹೋತ್ಸವದಲ್ಲಿ ಅವರು ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
‘ಮಠದಿಂದ ಭಕ್ತರಿಗೆ ಉತ್ತಮ ಮೌಲ್ಯ ಮತ್ತು ಸಂಸ್ಕಾರದ ಜ್ಞಾನ ನೀಡುವ ಕೆಲಸವನ್ನು ಕೈಗೊಳ್ಳಲಾಗುವುದು’ ಎಂದರು.
ವಿಜಯಪುರದ ಅಭಿನವ ಶಿವಪುತ್ರ ಸ್ವಾಮೀಜಿ ಮಾತನಾಡಿ, ‘ನಮ್ಮ ಮಠಗಳಿಂದ ಬಸವಾದಿ ಶರಣರು ನೀಡಿದ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾಯಕ ನಿರಂತರವಾಗಿ ನಡೆಯಬೇಕು, ಸೇವೆ ಮಾಡುವ ವ್ಯಕ್ತಿಯು ಸದಾ ದೊಡ್ಡವನು ಆಗಿರುತ್ತಾನೆ’ ಎಂದರು.
ಮಾದನ ಹಿಪ್ಪರಗಾದ ಶಾಂತವೀರ ಸ್ವಾಮೀಜಿ ಮಾತನಾಡಿ, ‘ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಮೃತ್ಯುಂಜಯ ಸ್ವಾಮೀಜಿ ಅವರು ಸಮಾಜಕ್ಕೆ ಮಾರ್ಗದರ್ಶನ ನೀಡಲಿದ್ದಾರೆ’ ಎಂದರು.