ಚಿಂಚೋಳಿ (ಕಲಬುರಗಿ ಜಿಲ್ಲೆ): ತಂದೆಯೇ ಎರಡು ಕಾರಿನಲ್ಲಿ ಗುಂಪು ಕಟ್ಟಿಕೊಂಡು ಬಂದು ಒಂದು ವರ್ಷದ ಹಸುಳೆಯನ್ನು ಅಪಹರಿಸಿದ ಘಟನೆ ಭಾನುವಾರ ತಾಲ್ಲೂಕಿನ ಯಂಪಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು 8 ಮಂದಿಯ ಗುಂಪು ಪುಟಾಣಿ ಮಗುವನ್ನು ಬಲವಂತದಿಂದ ಅಪಹರಿಸಿಕೊಂಡು ಹೋಗಿದ್ದು, ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಕೈಕಾಲು ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೌರಮ್ಮ ಮಗುವಿನೊಂದಿಗೆ ತವರಿನಲ್ಲಿ ತಂದೆ ತಾಯಿಯ ಮನೆಯಲ್ಲಿದ್ದಾಳೆ. ಅತ್ತೆ ಮಾವ ಹಾಗೂ ಪತ್ನಿಯ ಮೇಲೆ ಹಲ್ಲೆ ನಡೆಸಿದ ಅಳಿಯ ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ. ಯಂಪಳ್ಳಿಯ ಗೌರಮ್ಮಳನ್ನು ಸಮೀಪದ ಚಿಟ್ಟಗುಪ್ಪಾ ಗ್ರಾಮದ ಯುವಕನೊಂದಿಗೆ ಮದುವೆ ಮಾಡಲಾಗಿದೆ. ಮದುವೆಯಾದ ಕೆಲ ದಿನಗಳ ನಂತರ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರು. ಯಾರು ಹೇಳಿದರೂ ಕೇಳದಿದ್ದಾಗ ಮಗಳನ್ನು ವರ್ಷದ ಹಿಂದೆ ಶರಣಪ್ಪ ಬಿರಾದಾರ ತವರಿಗೆ ಕರೆದುಕೊಂಡು ಬಂದಿದ್ದಾರೆ.
ತವರಿನಲ್ಲಿ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆಯ ನಂತರ ಮಗು ನೀಡುವಂತೆ ಅಳಿಯ ಪೀಡಿಸುತ್ತಿದ್ದನು. ಭಾನುವಾರ ಹಠಾತ್ತನೆ ಬಂದು ಮಗುವನ್ನು ಅಪಹರಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವಿನೊಂದಿಗೆ ಸಮೀಪದ ಕೊತ್ಲಾಪುರ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಕೆಲ ದಿನಗಳ ಹಿಂದೆ ಕೊತ್ಲಾಪುರಕ್ಕೆ ಹೋದಾಗಲೂ ಮಗು ಅಪಹರಿಸಲು ಯತ್ನಿಸಿದ್ದ.
ಗ್ರಾಮಸ್ಥರ ಮಾಹಿತಿ ಮೇರೆಗೆ ಪೊಲೀಸರನ್ನು ಯಂಪಳ್ಳಿಗೆ ಕಳುಹಿಸಿದ್ದೇನೆ. ಪತಿ ಪತ್ನಿ ಮಧ್ಯೆ ಜಗಳವಿದೆ ಎಂದು ಸಬ್ ಇನ್ಸ್ಪೆಕ್ಟರ್ ಹಣಮಂತ ಭಂಕಲಗಿ ತಿಳಿಸಿದ್ದಾರೆ.
ಘಟನೆಯಲ್ಲಿ ಒಬ್ಬ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ತನ್ನ ಹೆಸರು ನಾಗರಾಜ ರಾಯಚೂರ ಮೂಲದವನು ಎಂದು ಮಾಹಿತಿ ನೀಡಿದ್ದಾರೆ. ಅಪಹರಿಸಲು ಬಂದವರ ಹೆಸರು ಗೊತ್ತಿಲ್ಲ ಎಂದಿದ್ದಾನೆ. ಹೈದರಾಬಾದ್ನಿಂದ ಬಂದಿದ್ದಾಗಿ ತಿಳಿಸಿದ್ದಾನೆ.