ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿಗಳಾದ ಅಸ್ಲಂ ಸೈಫುನ್ ಮುಲ್ಕ್ ಮುಜಾವರ ಮತ್ತು ಮುನಾಫ್ ಜಮಾದಾರ ಅವರನ್ನು ಸಿಐಡಿ ಅಧಿಕಾರಿಗಳು ಶನಿವಾರ ವಿಚಾರಣೆ ಮಾಡಲಿದ್ದಾರೆ.
‘ಅಫಜಲಪುರ ತಾಲ್ಲೂಕು ಮಣೂರ ಗ್ರಾಮದ ಅಸ್ಲಂ ಸೈಫುನ್ ಮುಲ್ಕ್ ಮುಜಾವರ ಮತ್ತು ಕರಜಗಿಯ ಮುನಾಫ್ ಅವರನ್ನು ಸಿಐಡಿ ಅಧಿಕಾರಿಗಳು ಈ ಹಿಂದೆ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಕಲಬುರಗಿಯ ನೊಬೆಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ’ ಎಂಬುದು ಗೊತ್ತಾಗಿದೆ.
ನೊಬೆಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ ಸಂಬಂಧ ಮಾಜಿ ಸೈನಿಕ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದ ವಿಶ್ವನಾಥ ತಿಮ್ಮಪ್ಪ ಮಾನೆ ಎಂಬ ಆರೋಪಿಯನ್ನು ಸಿಐಡಿ ವಿಚಾರಣೆ ನಡೆಸಿ, ಗುರುವಾರವಷ್ಟೇ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.