ಕಲಬುರ್ಗಿ: ನಗರದ ವಿವಿಧೆಡೆ ನಡೆದ ಏಳು ಕಳುವು ಪ್ರಕರಣಗಳಲ್ಲಿ ₹ 10.75 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದ ತಾಜಸುಲ್ತಾನಪುರದ ಮಲ್ಲಪ್ಪ ಗಣಪತಿ ಗೌನ್ಯಾ ಕಾಳೆ (32) ಹಾಗೂ ಶೇಖರ ರಾಮಜಿ ಕಾಳೆ (25) ಎಂಬುವವರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿ ಅವರಿಂದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಕಮಿಷನರ್ ಸತೀಶಕುಮಾರ್ ಎನ್., ಡಿಸಿಪಿ ಡಿ.ಕಿಶೋರಬಾಬು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿಶ್ವವಿದ್ಯಾಲಯ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಿವಾನಂದ ಗಾಣಿಗೇರ ನೇತೃತ್ವದ ತಂಡ ಜೇವರ್ಗಿ ರಸ್ತೆಯ ಸಾಯಿ ಮಂದಿರದ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡರು.
ಬಂಧಿತರ ಬಳಿ ಇದ್ದ ಕಬ್ಬಿಣದ ರಾಡ್, ಮೋಟರ್ ಬೈಕ್ನ್ನು ವಶಕ್ಕೆ ಪಡೆದಿದ್ದಾರೆ. ಕಲಬುರ್ಗಿಯ ಶಿವಶಕ್ತಿ ನಗರ, ಅಮನ್ ನಗರ, ಅನ್ನಪೂರ್ಣೇಶ್ವರಿ ಕಾಲೊನಿ, ಕೃಷ್ಣಾ ನಗರ, ಸಿದ್ಧೇಶ್ವರ ಕಾಲೊನಿ, ಆಜಾದಪುರ ರೋಡ್, ವೀರೇಂದ್ರ ಪಾಟೀಲ ಲೇಔಟ್ಗಳಲ್ಲಿ ಮನೆಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.