ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸ್ಥಾನಕ್ಕೆ ಮರು ಆಯ್ಕೆ ಬಯಸಿ ಸ್ಪರ್ಧಿಸಿರುವ ವೀರಭದ್ರ ಸಿಂಪಿ ಅವರು ಶರಣಬಸವೇಶ್ವರ ದಾಸೋಹ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವೇಶ್ವರ ವಿ.ವಿ. ಕುಲಾಧಿಪತಿಡಾ. ಶರಣಬಸವಪ್ಪ ಅಪ್ಪ ಅವರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಪ್ಪ, ’ಎಂಥದ್ದೇ ಪರಿಸ್ಥಿತಿ ಬಂದರೂ ಆದರ್ಶಗಳನ್ನು ನಂಬಿ ಬದುಕುವುದರಿಂದ ನಮ್ಮ ಉನ್ನತಿ ಇತರರಿಗೆ ಮಾದರಿ ಎನಿಸುತ್ತದೆ. ಆದರ್ಶದ ಬೆಳೆಯನ್ನು ಬಿತ್ತಿದಾಗ ಮಾತ್ರ ಆದರ್ಶ ಇಳುವರಿಯಾಗಿ ಬರುತ್ತದೆ. ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ‘ ಎಂದರು.
1928 ಮತ್ತು 1948ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ದೊಡ್ಡಪ್ಪ ಅಪ್ಪ ಅವರ ನೇತೃತ್ವದಲ್ಲಿ ನಡೆಸಿ ನಾಡು ನುಡಿಗಾಗಿ ಸಂಸ್ಥಾನವು ಶ್ರಮಿಸುತ್ತಾ ಬಂದಿದೆ. ಜೊತೆಗೆ, ಕರ್ನಾಟಕ ಏಕೀಕರಣದ ಹೋರಾಟಕ್ಕೂ ಶರಣ ಸಂಸ್ಥಾನ ಕೊಡುಗೆ ನೀಡಿದೆ. ಈ ನಿಟ್ಟಿನಲ್ಲಿ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗಾಗಿ ವೀರಭದ್ರ ಸಿಂಪಿ ಮುಂಚೂಣಿಯಲ್ಲಿ ನಿಂತು ನಡೆಸುತ್ತಾ ಬಂದಿರುವ ಹೋರಾಟಗಳನ್ನು ತಾವು ಗಮನಿಸಿರುವುದಾಗಿ ಹೇಳಿದರು.
ಡಾ.ದಾಕ್ಷಾಯಣಿ ಅಪ್ಪ ಮಾತನಾಡಿ, ಶರಣ ಸಂಸ್ಕೃತಿಯ ಹಾದಿಯಲ್ಲಿ ನಡೆಯುವವರಿಗೆ ನಿಶ್ಚಿತವಾಗಿಯೂ ಫಲವಿದೆ ಎಂದರು.