ಚಿಂಚೋಳಿ: ತಾಲ್ಲೂಕಿನ ಶೇರಿಭಿಕನಳ್ಳಿ ತಾಂಡಾ ವಾಸಿಗಳಿಗೆ ಪರಿಹಾರ ನೀಡಿ ಪುನರ್ವವಸತಿ ಸೌಲಭ್ಯ ಕಲ್ಪಿಸಬೇಕು. ಇದಕ್ಕಾಗಿ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಎರಡು ತಿಂಗಳ ಕಾಲಾವಕಾಶ ನೀಡಲಿದೆ. ಆದರೂ ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ತಾಂಡಾ ಜನರೊಂದಿಗೆ ಸೇರಿ ಹೋರಾಟಕ್ಕೆ ಇಳಿಯುವುದಾಗಿ ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಎಚ್ಚರಿಕೆ ನೀಡಿದ್ದಾರೆ.
ತಾಂಡಾಕ್ಕೆ ಶನಿವಾರ ಭೇಟಿ ನೀಡಿದ ಅವರು, ಸ್ಥಳೀಯರು ಒಪ್ಪಿದರೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ತಾಂಡಾ ಸ್ಥಳಾಂತರ ಆಗುತ್ತಿಲ್ಲ. ಇದರಿಂದ ಈ ಜನರ ಬವಣೆಗೆ ಮುಕ್ತಿ ಸಿಗುತ್ತಿಲ್ಲ ಎಂದು ಹೇಳಿದರು.
ತಾಂಡಾದ ಪ್ರತಿ ಪಡಿತರಚೀಟಿಗೆ ₹25 ಲಕ್ಷ ಪರಿಹಾರ ಧನ, ಜಮೀನು ಹೊಂದಿರುವವರಿಗೆ ಅಷ್ಟೇ ಪ್ರಮಾಣದ ಜಮೀನು ಹಾಗೂ ಭೂ ರಹಿತರಿಗೆ ತಲಾ 3 ಎಕರೆ ಜಮೀನು ಮಂಜೂರು ಮಾಡಬೇಕು. ಜನರಿಗೆ ಕೊಡುವುದಕ್ಕಾಗಿ 150 ಎಕರೆ ಕೃಷಿ ಭೂಮಿ, ತಾಂಡಾ ಸ್ಥಾಪನೆಗೆ 12 ಎಕರೆ ಪ್ರತ್ಯೇಕ ಭೂಮಿ ಕೊಡಿಸಬೇಕು. ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಜನರ ಬೇಡಿಕೆಗಳನ್ನು ವಿವರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ, ಜಿ.ಪಂ. ಸದಸ್ಯ ಗೌತಮ ಪಾಟೀಲ, ಮಾಜಿ ಸದಸ್ಯ ಗೋಪಾಲರೆಡ್ಡಿ ಕಸ್ತೂರಿ, ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿರಂಜೀವಿ ಪಾಪಯ್ಯ, ಅಬ್ದುಲ್ ಬಾಷೀತ್ ಮುಖಂಡರು ಇದ್ದರು.