ಆಳಂದ: ‘ಸಮಾಜದ ಸಾಮರಸ್ಯಕ್ಕಾಗಿ, ಎಲ್ಲ ವರ್ಗಗಳ ಕಲ್ಯಾಣ ಹಾಗೂ ಸಾಮಾಜಿಕ ನ್ಯಾಯದ ತಳಹದಿ ಮೇಲೆ ಹಿಂದುಳಿದ, ಬಡ ಹಾಗೂ ಶೋಷಿತರ ಪ್ರಗತಿಗಾಗಿ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿ’ ಎಂದು ಗುಲ್ಬರ್ಗ ಗ್ರಾಮೀಣ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ತಾಲ್ಲೂಕಿನ ವಿಕೆ ಸಲಗರ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
‘ಲೋಕಸಭೆಯ ಸದಸ್ಯನಾಗಿ ಚುನಾಯಿಸಿದ ಕ್ಷೇತ್ರದ ಜನತೆಗೆ ಕೀರ್ತಿ ತರುವಂತೆ ಕೆಲಸ ಮಾಡಿದ್ದೇನೆ, ಕಳಂಕ ತಂದಿಲ್ಲ. ಈಗ ಮತ್ತೆ ಜನರ ಸೇವೆ ಮಾಡುವ ಶಕ್ತಿ ಕೊಡಿ’ ಎಂದು ಖರ್ಗೆ ಮತದಾರರಿಗೆ ವಿನಂತಿಸಿದರು.
‘38ವರ್ಷ ಗುರಮಠಕಲ್ ಜನತೆ ಕೈಹಿಡಿದು ಬೆಳೆಸಿದ್ದಾರೆ. ಕಳೆದ ಬಾರಿ ಲೋಕಸಭೆಯಲ್ಲಿ ಅಲ್ಪಮತದಲ್ಲಿ ಬಂದ ಗೆಲುವು ತನಗೆ ತೃಪ್ತಿ ನೀಡಿಲ್ಲ. ಅವಿರೋಧ ಆಯ್ಕೆಗಿಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕ ಆಯ್ಕೆಯಾಗುವುದು ಜೀವಂತಿಕೆಯ ಲಕ್ಷಣ’ ಎಂದರು.
ಶಾಸಕ ಜಿ.ರಾಮಕೃಷ್ಣ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸೊಂತ, ಶರಣು ಸಲಗರ, ಮೀರಾಜ್ ಪಟೇಲ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಮೇಶ ಮರನೂರ, ಉಪಾಧ್ಯಕ್ಷೆ ಅನೀತಾ ವಳಕೇರಿ, ಸದಸ್ಯ ಗುರುಲಿಂಗಪ್ಪ ಪಾಟೀಲ ಅಂದೋಲಾ, ನಿತೀನ ಗುತ್ತೇದಾರ, ಚಂದ್ರಿಕಾ ಪರಮೇಶ್ವರಿ, ಅಂಬಾರಾಯ ಅಷ್ಟಗಿ, ಬಾಬು ಹೊನ್ನಾನಾಯಕ, ಸೋಮಶೇಖರ ಗೋನಾಯಕ, ಸಿ.ಎ.ಪಾಟೀಲ, ಕವಿತಾ ಎಸ್. ಪಾಟೀಲ, ಅಕ್ಷರಾಬಾಯಿ ಕಾಂಬಳೆ, ಸತೀಶ ಮಾಲಿ ಪಾಟೀಲ, ಕುಪೇಂದ್ರ ಗುರಡೆ, ಸುಭಾಷ ಮುರುಡ ಇದ್ದರು.
ಮುಖಂಡ ಶರಣಗೌಡ ಪಾಟೀಲ ನಿರೂಪಿಸಿದರು. ಸಂಜುಕುಮಾರ ಪಾಟೀಲ ವಂದಿಸಿದರು.
ಸರ್ಕಾರಿ ನೌಕರ ಶರಣು ಸಲಗರ ವೃತ್ತಿಗೆ ರಾಜಿನಾಮೆ ನೀಡಿ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಬೆಳಮಗಿ, ಕರಹರಿ, ಕಮಲಾನಗರ, ಸಾವಳಗಿ, ನರೋಣಾ, ಚಿಂಚನಸೂರ, ಅಂಬಲಗಾ, ಲಾಡಮುಗಳಿ ಸೇರಿದಂತೆ ಅನೇಕ ಗ್ರಾಮಗಳ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.