ಸಾಗರ: ತಾಲ್ಲೂಕಿನ ಹೊಸಗದ್ದೆ ಗ್ರಾಮದ ಕೃಷ್ಣಮೂರ್ತಿ ಎಂಬ ಶಂಕಿತ ಮಂಗನ ಕಾಯಿಲೆ ರೋಗಿಯನ್ನು ಭಾನುವಾರ ಮಣಿಪಾಲದ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಕಲ್ಮನೆ ಗ್ರಾಮದಲ್ಲಿ ಒಂದು ಮಂಗನ ಶವ ಪತ್ತೆಯಾಗಿದ್ದು ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿ ಅದರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಶಂಕಿತ ಮಂಗನಕಾಯಿಲೆ ಜ್ವರದಿಂದ ಬಳಲುತ್ತಿರುವ ಅರಲಗೋಡು ಗ್ರಾಮದ ಇಬ್ಬರು ಮತ್ತು ಕಾರ್ಗಲ್ ಕುಳಕಾರು ಗ್ರಾಮದ ಒಬ್ಬರನ್ನು ಭಾನುವಾರ ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.
ಅರಲಗೋಡು ಗ್ರಾಮದ ಜರೀನಾ ಮತ್ತು ಸರೋಜ, ಕಾರ್ಗಲ್ ಕುಳಕಾರು ಗ್ರಾಮದ ಲತಾ ಅವರಲ್ಲಿ ಜ್ವರ ಕಂಡು ಬಂದಿದೆ ಎಂದು ಅರಲಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಿತಿನ್ ಪಾಟೀಲ್ ತಿಳಿಸಿದರು.