ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 1.01 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿದ್ದು, ಅವರಿಗೆ ‘ಅನ್ನಭಾಗ್ಯ’ದ ಹೆಚ್ಚುವರಿ 5 ಅಕ್ಕಿ ಹಣವು ಇನ್ನು 4 ದಿನಗಳಲ್ಲಿ ಸಂದಾಯವಾಗಲಿದೆ. ಪಡಿತರ ಚೀಟಿಯಲ್ಲಿ ನಮೂದಿಸಿರುವ ಕುಟುಂಬದ ಯಜಮಾನರ ಬ್ಯಾಂಕ್ ಖಾತೆಗೆ ಒಬ್ಬರಿಗೆ ₹ 170ರಂತೆ ನೇರವಾಗಿ ಹಣ ಜಮೆಯಾಗಲಿದೆ.
ರಾಜ್ಯ ಸರ್ಕಾರ ರಾಜ್ಯ ಮಟ್ಟದಲ್ಲಿ ಸೋಮವಾರ ಯೋಜನೆಗೆ ಚಾಲನೆ ನೀಡಿದ್ದರೂ, ಜಿಲ್ಲೆಯ ಫಲಾನುಭವಿಗಳ ಖಾತೆಗೆ ಮೊದಲ ದಿನ ಹಣ ಜಮೆ ಆಗಿಲ್ಲ. ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಬ್ಯಾಂಕ್ ಖಾತೆ ಹಣ ಸಂದಾಯವಾಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ‘ಪ್ರಜಾವಾಣಿ’ಗೆ ತಿಳಿಸಿದರು.
ಅತ್ಯಧಿಕ ಬಿಪಿಎಲ್ ಪಡಿತರ ಸೋಮವಾರಪೇಟೆ 23,215 ಬಿಪಿಎಲ್ ಪಡಿತರ ಚೀಟಿದಾರರಿದ್ದಾರೆ. ನಂತರದ ಸ್ಥಾನದಲ್ಲಿ ಮಡಿಕೇರಿ 23,157, ಕುಶಾಲನಗರ 21,238, ಪೊನ್ನಂಪೇಟೆ 15,641 ಹಾಗೂ ವಿರಾಜಪೇಟೆ 18,415 ಪಡಿತರ ಚೀಟಿದಾರರಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರದ ಆಹಾಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಅಂತ್ಯೋದಯ ಕಾರ್ಡ್ದಾರರಿಗೆ 35 ಕೆಜಿ ಅಕ್ಕಿ ವಿತರಣೆಯಾಗುತ್ತಿದೆ. ಬಿಪಿಎಲ್ ಕಾರ್ಡ್ನ ಸದಸ್ಯರಿಗೆ ತಲಾ 5 ಕೆಜಿ ಪಡಿತರ ಸಿಗುತ್ತಿದೆ. ಜಿಲ್ಲೆಯಲ್ಲಿ 9,880 ಅಂತ್ಯೋದಯ ಕಾರ್ಡ್ದಾರರು ಇದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,48,687 ಪಡಿತರ ಚೀಟಿದಾರರಿದ್ದು, ಅದರಲ್ಲಿ 37,141 ಎಪಿಎಲ್, 1,01,666 ಬಿಪಿಎಲ್, 9,880 ಅಂತ್ಯೋದಯ ಪಡಿತರ ಚೀಟಿಗಳಿವೆ.