ಕುಶಾಲನಗರ: ಸಮೀಪದ ನಂಜರಾಯ ಪಟ್ಟಣ ಬಳಿಯ ದುಬಾರೆ ಸಾಕಾನೆ ಶಿಬಿರದಿಂದ ಐದು ದಿನಗಳ ಹಿಂದೆ ತಪ್ಪಿಸಿ ಕೊಂಡು ಹೋಗಿದ್ದ ಗೋಪಿ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಾವುತರು ಪತ್ತೆ ಮಾಡಿ, ಶಿಬಿರಕ್ಕೆ ಗುರುವಾರ ಕರೆತಂದಿದ್ದಾರೆ.
ಸಾಕಾನೆ ಗೋಪಿ ಮದವೇರಿದ್ದರಿಂದ ಸಂಗಾತಿಗಾಗಿ ದುಬಾರೆ ಅರಣ್ಯ ಪ್ರದೇಶದ ಕಡೆಗೆ ಹೋಗುತ್ತಿತ್ತು. ಕಾಡಾನೆಗಳೊಂದಿಗೆ ಕಾದಾಟಕ್ಕೆ ಹೋಗಿ ಅನಾಹುತ ಸಂಭವಿಸುವ ಆತಂಕ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾಡಿತ್ತು. ಹೀಗಾಗಿ, ಗೋಪಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.
ದುಬಾರೆ ಸಮೀಪದ ಅರಣ್ಯದಲ್ಲಿ ಇದ್ದ ಗೋಪಿಯನ್ನು ಶಿಬಿರಕ್ಕೆ ಕರೆತಂದಿದ್ದಾರೆ. ಶಿಬಿರದಲ್ಲಿನ ಇತರೆ ಆನೆಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ಮದವೇರಿದ ಗೋಪಿ ಆನೆಯು ಇದುವರೆಗೂ ಯಾವುದೇ ಪ್ರತಿರೋಧ ವ್ಯಕ್ತಪಡಿಸಿಲ್ಲ. ಆದರೂ ಮದ ಇಳಿಯಲು ಇನ್ನೂ ಐದಾರು ದಿನಗಳು ಬೇಕಾಗಿದೆ. ಗೋಪಿಯ ಕಾಲಿಗೆ ಸರಪಳಿ ಹಾಕಿ ಪ್ರತ್ಯೇಕವಾಗಿ ಕಟ್ಟಿ ಹಾಕಲಾಗಿದೆ ಎಂದು ದುಬಾರೆ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ.