ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ವಿಭಾಗ ಹಾಗೂ ನಾಗರಹೊಳೆ ಅರಣ್ಯದಲ್ಲಿ ಆನೆ ಗಣತಿ ಕಾರ್ಯ ಶುಕ್ರವಾರ ಮುಂದುವರಿಯಿತು.
ಆನೆಗಣತಿಯ 2ನೇ ದಿನವಾದ ಶುಕ್ರವಾರ ಲೈನ್ ಟ್ರಾನ್ಸೆಕ್ಟ್ ವಿಧಾನದಲ್ಲಿ ಗಣತಿ ಕಾರ್ಯ ನಡೆಸಲಾಯಿತು. ಸುಮಾರು 2 ಕಿ.ಮೀ ದೂರ ಸಿಬ್ಬಂದಿ ತಮ್ಮ ಬೀಟ್ನಲ್ಲಿ ನಡೆಯುತ್ತ ದಾರಿಯಲ್ಲಿ ಸಿಕ್ಕ ಆನೆಗಳ ಲದ್ದಿಗಳನ್ನು ಹಾಗೂ ಕಣ್ಣಿಗೆ ಸಿಕ್ಕ ಆನೆಗಳನ್ನೂ ದಾಖಲಿಸಿಕೊಂಡರು.
ಮಡಿಕೇರಿ ಪ್ರಾದೇಶಿಕ ಮತ್ತು ವನ್ಯಜೀವಿ ವಲಯದಲ್ಲಿರುವ ಒಟ್ಟು 98 ಬೀಟ್ಗಳಲ್ಲಿ, ವಿರಾಜಪೇಟೆ ವಿಭಾಗದಲ್ಲಿನ ಮುನ್ರೋಟು, ತಿತಿಮತಿ, ಪೊನ್ನಂಪೇಟೆ, ವಿರಾಜಪೇಟೆ ಹಾಗೂ ಮಾಕುಟ್ಟ ವಲಯಗಳಲ್ಲಿ 23 ತಂಡಗಳು ಮತ್ತು ನಾಗರಹೊಳೆಯ ಎಲ್ಲ ಬೀಟ್ಗಳಲ್ಲೂ ಏಕಕಾಲಕ್ಕೆ ಗಣತಿ ಕಾರ್ಯ ನಡೆಯಿತು.
ಆನೆಗಣತಿಯ ಅಂತಿಮ ದಿನವಾದ ಶನಿವಾರ ಜಲಮೂಲಗಳ ಬಳಿ ಕೂತು ಅಲ್ಲಿಗೆ ನೀರು ಕುಡಿಯಲು ಬರುವ ಆನೆಗಳ ಸಂಖ್ಯೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ನಂತರ, ಈ ಮೂರು ದಿನಗಳ ದತ್ತಾಂಶಗಳನ್ನು ವಿಶ್ಲೇಷಿಸಿ ಅಂತಿಮವಾಗಿ ಆನೆಗಳ ಸಂಖ್ಯೆಯನ್ನು ಬಹಿರಂಗಗೊಳಿಸಲಾಗುತ್ತದೆ.
ನಾಗರಹೊಳೆ ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಆನೆಗಳ ಗಣತಿ ಕಾರ್ಯ ನಡೆಸಿದರು