ಕುಶಾಲನಗರ: ಉತ್ತರ ಕೊಡಗಿನ ಹೆಬ್ಬಾ1ಲೆ ಗ್ರಾಮದಲ್ಲಿ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
‘ಸ್ಥಳೀಯ ಮಾದರಿ ಯುವಕ ಸಂಘ’ದ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಎತ್ತಿನಗಾಡಿ ಓಡಿಸುವ ಸ್ಪರ್ಧೆ ನಡೆಯಿತು. ರೋಮಾಂಚನಕಾರಿ ಹಾಗೂ ಸಾಹಸ ಮಯ ಕ್ರೀಡೆಯನ್ನು ನೋಡಲು ಹೆಬ್ಬಾಲೆ, ಸಮೀಪದ ಹಂಪಾಪುರ, ಸರಗೂರು, ಚಾಮರಾಜ ಕೋಟೆ, ಮಲ್ಲಿನಾಥಪುರ ಗ್ರಾಮ ಹಾಗೂ ಕೊಡಗು, ಮೈಸೂರು ಹಾಗೂ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಂದ ಸಾವಿರಾರು ಮಂದಿ ಬಂದಿದ್ದರು.
ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚಿನ ಎತ್ತಿನಗಾಡಿ ಮಾಲೀಕರು ಪಾಲ್ಗೊಂಡಿದ್ದರು. ಓಟದಲ್ಲಿ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು. ಮಧ್ಯಾಹ್ನ 12ಕ್ಕೆ ಜಿಲ್ಲಾ ಪಂಚಾಯಿತಿ ಕೃಷಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಎತ್ತುಗಳು ಓಡುತ್ತಿ ದ್ದಂತೆ ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಹುರಿದುಂಬಿಸುತ್ತಿದ್ದರು.
ಕೆಲ ಎತ್ತುಗಳು ಯದ್ವಾತದ್ವ ಓಡುತ್ತ ಜನರತ್ತ ನುಗ್ಗಿದವು. ಎತ್ತಿನಗಾಡಿಗಳು ಸಮೀಪಕ್ಕೆ ಬರುತ್ತಿದ್ದಂತೆ ಜನರು ಹಿಂದೆ ಸರಿದರು. ಕೆಲವರು ಎತ್ತುಗಳನ್ನು ತಡೆಯಲೆತ್ನಿಸಿದರು. ಇದರಿಂದ ಅಪಾಯ ತಪ್ಪಿತು.
ಮಾದರಿ ಯುವಕ ಸಂಘವು 17 ವರ್ಷಗಳಿಂದ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸುಗ್ಗಿಗೆ ಮುನ್ನ ಈ ಸ್ಪರ್ಧೆ ನಡೆಯುತ್ತದೆ. ರೈತರು ಗಾಡಿ ಓಟಕ್ಕೆ ಎತ್ತುಗಳನ್ನು ತಯಾರು ಮಾಡುತ್ತಾರೆ.
ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ರಂಗೋಲಿ, ಓಟದ ಸ್ಪರ್ಧೆ, ಸಂಗೀತ ಕುರ್ಚಿ, ಮೂರು ಕಾಲಿನ ಓಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು.
ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಆರ್.ಆದರ್ಶ, ಕಾರ್ಯದರ್ಶಿ ಎಚ್.ಟಿ.ಸಂತೋಷ್, ಖಜಾಂಚಿ ಎಚ್.ಟಿ.ಪುನೀತ್, ಸಂಘಟನಾ ಕಾರ್ಯದರ್ಶಿ ಎಚ್.ಜೆ.ಸುಧೀರ್, ಎಚ್.ಜೆ.ಸುದರ್ಶನ್, ಮುಖಂಡರಾದ ಎಚ್.ಜೆ.ಕುಮಾರ್, ಪುನೀತ್, ಮನು, ಎಚ್.ಎನ್.ಮಂಜುನಾಥ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಮೂರ್ತಿ, ಕರುಂಬಯ್ಯ, ಬೋಜೇಗೌಡ, ಸಂತೋಷ್, ಸಲಹೆಗಾರ ರಾದ ಎಚ್.ಎನ್.ರಾಜಶೇಖರ್, ಎಚ್.ಕೆ.ರಘು ಇದ್ದರು.
8 ಗ್ರಾಂ ಚಿನ್ನ:ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ 11.25 ಸೆಕೆಂಡ್ಗಳಲ್ಲಿ ನಿಗದಿತ ಗುರಿ ತಲುಪಿದ ಸಾಲಿಗ್ರಾಮದ ಮಧು (11.25 ಸೆಕೆಂಡ್) ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ಆರ್.ನಗರ ತಾಲ್ಲೂಕಿನ ರಾಜು (11.50 ಸೆಕೆಂಡ್) ದ್ವಿತೀಯ ಸ್ಥಾನ, ಚಿಕ್ಕಮಗಳೂರಿನ ಹೇಮಂತ್ (11.56 ಸೆಕೆಂಡ್) ತೃತೀಯ ಬಹುಮಾನ ಪಡೆದರು.
ಮೊದಲ ಸ್ಥಾನ ಪಡೆದವರಿಗೆ 8 ಗ್ರಾಂ ಚಿನ್ನ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ 5 ಗ್ರಾಂ ಚಿನ್ನ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.