ಮಡಿಕೇರಿ ನಗರದಲ್ಲೇ ಬೆಳೆದಿರುವ ಚಿಪ್ಪಣಬೆಯನ್ನು ಅಶ್ರಫ್ ಉನ್ನಿಸಾ, ಯೋಗೇಶ್, ಮೌಲ್ಯಾ ಹಾಗೂ ಇತರರು ಇಲ್ಲಿ ಪ್ರದರ್ಶನಕ್ಕಿರಿಸಿದ್ದಾರೆ. ಕಾಟಕೇರಿಯ ಪೇರಿಯಾನದ ಉಮೇಶ್ ಹಾಗೂ ಹೆಬ್ಬಾಲೆಯ ಬಸವಣ್ಣ ಬೆಳೆದ ತಾಳೆಹಣ್ಣು, ಹೆಬ್ಬಾಲೆಯಲ್ಲಿ ಬೆಳೆದ ಕ್ಯಾರೇಟ್, ಬೀಟ್ರೂಟ್, ವಿವಿಧ ಜಾತಿಯ ಸೊಪ್ಪುಗಳು, ಅರಿಸಿನ, ಶುಂಠಿ, ಮರಟೊಮೆಟೊ, ಕಾಡಂಜೂರ, ಲಕ್ಷ್ಮಣಫಲ, ಬೃಹತ್ ಗಾತ್ರದ ಕುಂಬಳಕಾಯಿ, ತೆಂಗಿನಕಾಯಿ, ಸೋರೆಕಾಯಿ, ಎಳನೀರು, ವಿವಿಧ ಜಾತಿಯ ಗೆಡ್ಡೆ ಗೆಣಸುಗಳು ಒಂದೇ ಎರಡೇ... ಈ ಮಳಿಗೆಯನ್ನು ವಿವರವಾಗಿ ವೀಕ್ಷಿಸಲು ಒಂದು ಗಂಟೆಯಾದರೂ ಸಾಲದು ಎನ್ನುತ್ತಾರೆ ಮಡಿಕೇರಿ ನಿವಾಸಿ ವಾಣಿಶ್ರೀ. ಜತೆಗೆ, ಜಿಲ್ಲಾಡಳಿತದ ಈ ಪ್ರಯತ್ನವನ್ನು ಅವರೂ ಸೇರಿದಂತೆ ಹಲವು ಮಂದಿ ಪ್ರವಾಸಿಗರು, ಸ್ಥಳೀಯರು ಶ್ಲಾಘಿಸಿದರು.